ಸಕಲೇಶಪುರ: ತಾಲ್ಲೂಕಿನ ದೇವಾಲದಕೆರೆಯಲ್ಲಿ ಮಂಗನ ಕಾಯಿಲೆ ಇರುವ ವೈರಸ್ ಪತ್ತೆಯಾಗಿದೆ.
ಗ್ರಾಮಸ್ಥರು ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಶ್ ತಿಳಿಸಿದರು.
ತಾಲ್ಲೂಕಿನ ದೇವಾಲದಕೆರೆ ಗ್ರಾಮ ಸಮೀಪ ಉಣ್ಣೆಗಳಲ್ಲಿ ಮಂಗನ ಕಾಯಿಲೆ ಹರಡುವ ವೈರಸ್ಗಳು ಪತ್ತೆ ಆಗಿವೆ. ಜಾನುವಾರುಗಳ ಮೇಲೆ ವೈರಸ್ ಇರುವ ಉಣ್ಣೆಗಳು ಕುಳಿತುಕೊಳ್ಳದಂತೆ ಪಶು ಇಲಾಖೆಯಿಂದ ಲೋಷನ್ ವಿತರಣೆ ಮಾಡಲಾಗಿದೆ. ಆ ಭಾಗದ ಗ್ರಾಮಸ್ಥರು ಮನೆಯಿಂದ ಹೊರಗೆ ಹೋಗುವಾಗ ಕೈ, ಕಾಲು ಮೈಗೆ ಹಚ್ಚಿಕೊಳ್ಳಲು ‘ಡಿಎಂಟಿ’ ಲೋಷನ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಈ ನಡುವೆ, ತಾಲ್ಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಮಂಗಗಳು ಸಾಮೂಹಿಕವಾಗಿ ಮೃತಪಟ್ಟಿರುವ ಸ್ಥಳಕ್ಕೆ ಭಾನುವಾರ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಗಳು ಸತ್ತು ಹಲವು ದಿನ ಕಳೆದಿದ್ದು, ಕಳೇಬರ ಕೊಳೆತಿರುವ ಕಾರಣ ಮಾದರಿ ಲಭಿಸಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯೇ ಸುಟ್ಟು ಹಾಕಿದರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.