ADVERTISEMENT

ಬಿಜೆಪಿಯವರು ಕ್ಷಮಾ ಯಾತ್ರೆ ಮಾಡಲಿ: ಸಲೀಂ ಅಹ್ಮದ್ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 21:38 IST
Last Updated 29 ಆಗಸ್ಟ್ 2021, 21:38 IST
ಸಲೀಂ ಅಹ್ಮದ್
ಸಲೀಂ ಅಹ್ಮದ್   

ಕಲಬುರ್ಗಿ: ‘ನಾಲ್ವರು ಕೇಂದ್ರ ಸಚಿವರು ಈಚೆಗೆ ಜನಾಶೀರ್ವಾದ ಯಾತ್ರೆ ನಡೆಸಿದರು. ಕೋವಿಡ್‌ ಸಂದರ್ಭದಲ್ಲಿ ಸಮರ್ಪಕವಾಗಿ ಬೆಡ್‌, ಆಮ್ಲಜನಕ, ರೆಮ್‌ಡೆಸಿವಿರ್ ಚುಚ್ಚುಮದ್ದು ನೀಡದೇ ವಿಫಲರಾಗಿದ್ದಕ್ಕೆ ಜನರ ಕ್ಷಮೆ ಕೇಳಲು ಕ್ಷಮಾ ಯಾತ್ರೆ ಮಾಡಬೇಕಿತ್ತು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಿಸಿದರು.

‘ರಾಜ್ಯದಲ್ಲಿ ಜನರು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದು, ಬೆಲೆ ಏರಿಕೆಯಿಂದಲೂ ತತ್ತರಿಸಿದ್ದಾರೆ. ಅಚ್ಛೆ ದಿನ್ ಭರವಸೆ ನೀಡಿ ಅತ್ಯಂತ ಕೆಟ್ಟ ದಿನಗಳಲ್ಲಿ ನರಳುವಂತೆ ಮಾಡಿದ್ದಕ್ಕೆ, ₹ 13 ಸಾವಿರ ಕೋಟಿ ಜಿಎಸ್‌ಟಿ ಅನುದಾನ ಬಿಡುಗಡೆ ಮಾಡಿಸಲು ಆಗದಿದ್ದುದಕ್ಕೆ ಸಚಿವರು ಕ್ಷಮೆ ಯಾತ್ರೆ ನಡೆಸಬೇಕಿತ್ತು’ ಎಂದು ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ಕೋವಿಡ್ ವೇಳೆ ರಾಜ್ಯ ಸರ್ಕಾರ ₹ 2 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ಎಸಗಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೆ ರಾಜ್ಯ ಸರ್ಕಾರವು ತಲಾ ₹ 5 ಲಕ್ಷ ಪರಿಹಾರ ನೀಡಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

‘ಯಾದಗಿರಿಯಲ್ಲಿ ಕೇಂದ್ರ ಸಚಿವರ ಸ್ವಾಗತದ ವೇಳೆ ಗಾಳಿಯಲ್ಲಿ ಗುಂಡುಹಾರಿಸಿದ್ದು ಉತ್ತರ ಪ್ರದೇಶ ಮತ್ತು ಬಿಹಾರದ ಸಂಸ್ಕೃತಿಯಾಗಿದ್ದು, ಅದನ್ನು ಬಿಜೆಪಿ ರಾಜ್ಯದಲ್ಲಿ ಪರಿಚಯಿಸುತ್ತಿದೆ. ಇದು ನಾಚಿಕೆಗೇಡು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.