ADVERTISEMENT

ಇದಾವುದು ಹೊಸ ಧರ್ಮ ಸನಾತನ: ನಟ ಕಿಶೋರ್‌ ಕುಮಾರ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2023, 10:31 IST
Last Updated 6 ಸೆಪ್ಟೆಂಬರ್ 2023, 10:31 IST
<div class="paragraphs"><p>ನಟ ಕಿಶೋರ್‌</p></div>

ನಟ ಕಿಶೋರ್‌

   

–ಫೇಸ್‌ಬುಕ್‌ ಚಿತ್ರ

ಬೆಂಗಳೂರು: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದಿರುವ ಅಯೋಧ್ಯೆ ಸ್ವಾಮಿ ವಿರುದ್ಧ ನಟ ಕಿಶೋರ್‌ ಕುಮಾರ್‌ ಕಿಡಿ ಕಾರಿದ್ದಾರೆ.

ADVERTISEMENT

ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗೋಣ. ವಿಶ್ವಮಾನವರಾಗೋಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ: ನಟ ಪ್ರಕಾಶ್‌ ರಾಜ್‌

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಇಷ್ಟೂ ದಿನ ಹಿಂದೂ ಹಿಂದೂ ಎಂದು ಅರಚುತಿದ್ದವರೆಲ್ಲ ಯಾಕೋ ಆ ಪದ ಬಿಟ್ಟೇ ಬಿಟ್ಟರೆನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹಾಗಾದರೆ ನಾವು ಹಿಂದೂಗಳಲ್ಲವೇ ಎಂದು ಕೇಳಿರುವ ಅವರು, ಇದಾವುದು ಹೊಸ ಧರ್ಮ? ಸನಾತನ? ಎಂದು ಪ್ರಶ್ನಿಸಿದ್ದಾರೆ.

‘ಕೆಲಸ ಮಾಡಲು ಯೋಗ್ಯತೆಯಿಲ್ಲದೆ ಈ ಪದಗಳ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವವರನ್ನು ಇದರ ಸಂಪೂರ್ಣ ನಿಖರ ಅರ್ಥ ಹೇಳಲು ಕೇಳಿಬಿಡಿ ಸಾಕು. ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದಿಂದ ಹೊರಬಂದು, ಹಿಂದೂ ಪದದ ನಿಜ ಅರ್ಥ, ಮೂಲ, ಅದರ ಹಿಂದಿನ ದ್ವೇಷದ ರಾಜಕೀಯ ಪ್ರಚಲಿತವಾಗುತ್ತಿದ್ದಂತೆ ಅದನ್ನು ಬಿಟ್ಟು ಸನಾತನ ಪದ ಹಿಡಿದ ದ್ವೇಷದ ವರ್ತಕರು ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿದ್ದೇ ಈ ಅನಾವಶ್ಯಕ ಚರ್ಚೆಗೆ ಕಾರಣ’ ಎಂದು ಹೇಳಿದ್ದಾರೆ.

‘ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾ ಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ, ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ, ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು , ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟ’ ಎಂದು ನುಡಿದಿದ್ದಾರೆ.

ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತಾ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ ಎಂದು ಪ್ರಶ್ನಿಸಿದ್ದಾರೆ.

ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ. ಈ ದಾರಿತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ, ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ. ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ. ವಿಶ್ವಮಾನವರಾಗುವ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.