
ಬೆಂಗಳೂರು: ಸುರಂಗ ರಸ್ತೆ ನಿರ್ಮಿಸುವ ಮೂಲಕ ರಾಜ್ಯ ಸರ್ಕಾರ ಪರಿಸರವನ್ನು ಹಾಳು ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.
ಸ್ಯಾಂಕಿ ಕೆರೆ ಸಂರಕ್ಷಣೆ ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ. ಬಿಜೆಪಿ ಬೆಂಗಳೂರಿನ ಅಭಿವೃದ್ಧಿಯ ವಿರೋಧಿಯಲ್ಲ. ಆದರೆ, ಯಾವುದೇ ಯೋಜನೆಗಳು ಪರಿಸರವನ್ನು ಹಾಳು ಮಾಡಬಾರದು. ಪರಿಸರ ಇಲಾಖೆ, ಪುರಾತತ್ವ ಇಲಾಖೆ, ಅರಣ್ಯ ಇಲಾಖೆಗಳ ಅನುಮತಿ ಪಡೆಯದೆ ಸುರಂಗ ರಸ್ತೆ ಕಾರ್ಯಗತಗೊಳಿಸುತ್ತಿರುವುದು ಸರಿಯಲ್ಲ’ ಎಂದರು.
‘ನಮ್ಮ ಮೆಟ್ರೊ ಯೋಜನೆಯಿಂದಾಗಿ ನಗರ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಮೆಟ್ರೊ ರೈಲು ಬಳಸುತ್ತಿದ್ದಾರೆ. ಇದನ್ನೇ ಸುಧಾರಣೆ ಮಾಡಿ, ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆಗ ಜನರಿಗೆ ಅನುಕೂಲವಾಗುತ್ತದೆ. ಪರಿಸರ, ಜಲಮೂಲಗಳಿಗೆ ಹಾನಿ ಮಾಡುವ ಸುರಂಗ ಮಾಡುತ್ತಿದ್ದಾರೆ. ಸುರಂಗದಿಂದ ತೆಗೆಯುವ ಹೂಳನ್ನು ಎಲ್ಲಿಗೆ ಸಾಗಿಸುತ್ತಾರೆ ಎನ್ನುವ ಖಾತ್ರಿಯೂ ಇಲ್ಲ’ ಎಂದು ಆರೋಪಿಸಿದರು.
ಹಣ ದೋಚುವ ಯೋಜನೆಗಳು ಬೆಂಗಳೂರು ನಗರಕ್ಕೆ ಬೇಕಿಲ್ಲ. ಬಿಹಾರ ಚುನಾವಣೆಗೆ ಹಣ ಕಳುಹಿಸಲು ಇಂತಹ ಯೋಜನೆ ರೂಪಿಸಿರಬಹುದು. ಜನರು ಈಗಾಗಲೇ ತೆರಿಗೆಗಳ ಭಾರದಿಂದ ನಲುಗಿದ್ದಾರೆ. ತ್ಯಾಜ್ಯ, ನೀರಿನ ದರವೂ ಏರಿಕೆಯಾಗಿದೆ. ಸುರಂಗ ರಸ್ತೆ ನಿರ್ಮಾಣವಾದ ಬಳಿಕ ಅದರಲ್ಲಿ ಪ್ರಯಾಣಿಸಬೇಕಾದರೆ ತಿಂಗಳಿಗೆ ₹20 ಸಾವಿರ ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.