ADVERTISEMENT

ಸ್ತಬ್ಧವಾಯಿತು ಸಂತೂರ್‌ ನಾದನದಿ

ಉಮಾ ಅನಂತ್
Published 10 ಮೇ 2022, 23:00 IST
Last Updated 10 ಮೇ 2022, 23:00 IST
ಶಿವಕುಮಾರ್ ಶರ್ಮಾ
ಶಿವಕುಮಾರ್ ಶರ್ಮಾ   

ಹೇಳಿ ಕೇಳಿ ಸಂತೂರ್‌ ಜಮ್ಮು ಕಾಶ್ಮೀರದಲ್ಲಿ ಒಂದು ಜಾನಪದ ವಾದ್ಯ. ಈ ತಂತಿ ವಾದ್ಯಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ, ನಾದದ ಘಮಲನ್ನು ವಿಶ್ವದುದ್ದಕ್ಕೂ ಪಸರಿಸಿದ ಅಪರೂಪದ ವಾದಕ ಪಂ. ಶಿವಕುಮಾರ್‌ ಶರ್ಮಾ. ತಂದೆ ಪಂ. ಉಮಾದತ್ತ ಶರ್ಮಾ ಅವರ ಬಳಿಯೇ ಸಂತೂರ್‌ ವಾದನ ಕಲಿತ ಪಂ. ಶರ್ಮಾ, ಸಾಧನೆಯ ಶಿಖರ; ಸಂಗೀತ ಲೋಕ ಕಂಡ ಅನರ್ಘ್ಯ ರತ್ನ!
ನಿರ್ಮಲವಾದ ನದಿಯ ಜುಳು ಜುಳು ನಾದದಂತೆಯೇ ಸಂತೂರ್‌ ವಾದ್ಯದ ನಿನಾದ‌ವೂ ಕೂಡ. ಕೇಳಲು ಬಹಳ ಇಂಪು.

ಸಂತೂರ್‌ನಲ್ಲಿ ಎಲ್ಲ ರಾಗಗನ್ನು ನುಡಿಸುವುದು ಕಷ್ಟ. ಅತ್ಯಂತ ಪ್ರಚಲಿತ ರಾಗಗಳನ್ನು ಲೀಲಾಜಾಲವಾಗಿ ನುಡಿಸಬಹುದು. ಪಂ. ಶಿವಕುಮಾರ್ ಶರ್ಮಾ, ಕಷ್ಟಕರ ರಾಗಗಳನ್ನೂ ನುಡಿಸುತ್ತಿದ್ದರು. ಪ್ರಹರ ರಾಗಗಳಿಗೆ ಆದ್ಯತೆ ನೀಡುತ್ತಿದ್ದರು. ಶಾಸ್ತ್ರೀಯ ಗಾಯನ ಬಲ್ಲವರಾಗಿದ್ದರಿಂದ ವಾದನದಲ್ಲಿ ರಾಗದ ಛಾಯೆ ವಿಶಿಷ್ಟ ಛಾಪು ಮೂಡಿಸುತ್ತಿತ್ತು.

ಸಂತೂರ್ ವಾದನ ಮಾತ್ರ ವಲ್ಲದೆ ಬಾಲಿವುಡ್‌ನಲ್ಲೂ ಹೆಸರು ವಾಸಿಯಾಗಿದ್ದರು. ಹಿಂದಿ ಸಿನಿಮಾಗಳಾದ ಚಾಂದನಿ, ಸಿಲ್‌ಸಿಲಾ, ಡರ್‌ ಮುಂತಾದವುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಇವೆಲ್ಲವೂ ಸೂಪರ್‌ ಹಿಟ್‌ ಸಿನಿಮಾ ಗಳಾಗಿದ್ದವು. ಅಲ್ಲದೆ ಬಾನ್ಸುರಿ ಮಾಂತ್ರಿಕ ಪಂ. ಹರಿಪ್ರಸಾದ್‌ ಚೌರಾಸಿಯ ಜೊತೆಗೂಡಿ ನೀಡಿದ ‘ಸಂತೂರ್‌– ಬಾನ್ಸುರಿ’ ಜುಗಲ್‌ಬಂದಿ ಜಗದ್ವಿಖ್ಯಾತ. ಇವರಿಬ್ಬರೂ ‘ಶಿವ-ಹರಿ’ ಹೆಸರಿನಲ್ಲಿ ಅನೇಕ ಹಿಂದಿ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ‘ಫಾಸ್ಲೆ, ವಿಜಯ್, ಲಮ್ಹೆ, ಪರಂಪರಾ, ಸಾಹಿಬಾನ್‌ ಚಿತ್ರಗಳು ಪ್ರಮುಖವಾದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.