ADVERTISEMENT

ನಿರಾಸೆಗೊಳಿಸಿದ ಕೇಜ್ರಿವಾಲ್‌: ನ್ಯಾ.ಸಂತೋಷ್‌ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 16:22 IST
Last Updated 22 ಮಾರ್ಚ್ 2024, 16:22 IST
ನ್ಯಾ. ಸಂತೋಷ ಹೆಗ್ಡೆ
ನ್ಯಾ. ಸಂತೋಷ ಹೆಗ್ಡೆ   

ಬೆಂಗಳೂರು: ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ತೀವ್ರ ಬೇಸರ ಮತ್ತು ನಿರಾಸೆ ಆಗಿದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.

‘ಅಧಿಕಾರಕ್ಕೆ ಬಂದಾಗ ದುರಾಶೆ ನಿಮ್ಮನ್ನು(ಕೇಜ್ರಿವಾಲ್) ಹಿಂದಿಕ್ಕುತ್ತದೆ ಎಂದು ಹೇಳಿದ್ದೆ. ಅದು ನಿಜವಾಗಿದೆ’ ಎಂದು ಅವರು ತಿಳಿಸಿದರು. ಅಣ್ಣಾ ಹಜಾರೆ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಅರವಿಂದ್ ಕೇಜ್ರಿವಾಲ್‌ ಜತೆ ಸಂತೋಷ್‌ ಹೆಗ್ಡೆಯವರೂ ಭಾಗವಹಿಸಿದ್ದರು.

‘ಆಮ್‌ ಆದ್ಮಿಪಕ್ಷ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನೀಡುತ್ತದೆ ಎಂದು ಭಾವಿಸಿದ್ದೆ. ಆದರೆ, ಈಗಿನ ಬೆಳವಣಿಗೆ ನಿರಾಶೆ ಉಂಟು ಮಾಡಿದೆ. ಸಂಪೂರ್ಣ ಅಧಿಕಾರ ಯಾರನ್ನಾದರೂ ಭ್ರಷ್ಟಗೊಳಿಸುತ್ತದೆ ಎನ್ನುವ ವಾಸ್ತವಿಕತೆಗೆ ಇದು ಸೂಚನೆಯಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿನ ಒಂದು ಗುಂಪು ರಾಜಕೀಯ ಪ್ರವೇಶಿಸಬೇಕು. ಅದನ್ನು ಸ್ವಚ್ಛಗೊಳಿಸಬೇಕು ಎಂದು ತೀರ್ಮಾನಿಸಿತ್ತು. ಇದು ಯಶಸ್ವಿ ಆಗುತ್ತದೆ ಎಂದು ನಂಬಿರಲಿಲ್ಲ. ನಾನು ಅಂದುಕೊಂಡಿದ್ದು ನಿಜವಾಗಿದೆ. ರಾಜಕಾರಣದಿಂದ  ದೂರ ಇದ್ದು ಅದನ್ನು ಸ್ವಚ್ಛಗೊಳಿಸಬೇಕು ಎಂದು ನಾವು ಕೆಲವರು ನಂಬಿದ್ದೆವು’ ಎಂದು ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.