ADVERTISEMENT

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ನಿರ್ಧಾರ ಸಮರ್ಥಿಸಿಕೊಂಡ ಡಿಸಿಎಂ ಸವದಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 14:57 IST
Last Updated 27 ಮೇ 2020, 14:57 IST
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ   

ಬೆಂಗಳೂರು: ಸ್ವಾತಂತ್ರ್ಯ ಸೇನಾನಿಗಳಾಗಿದ್ದ ವೀರ ಸಾವರ್ಕರ್ ಅವರ ಹೆಸರನ್ನು ಬೆಂಗಳೂರಿನ ಮೇಲ್ಸೇತುವೆಯೊಂದಕ್ಕೆ ನಾಮಕರಣ ಮಾಡುವ ಸಂಬಂಧ ನಮ್ಮ ಸರ್ಕಾರ ಸೂಕ್ತವಾದ ನಿರ್ಧಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ.

ಈ ನಿರ್ಧಾರವನ್ನು ವಾಸ್ತವವಾಗಿ ಎಲ್ಲ ಪಕ್ಷಗಳೂ ಸ್ವಾಗತಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ವಿರೋಧ ಪಕ್ಷಗಳು ಇದರಲ್ಲಿಯೂ ರಾಜಕೀಯದ ಅಪಸ್ವರ ಎತ್ತುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ನಡೆಸುತ್ತಿರುವುದು ಖಂಡನೀಯ. ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ರಾಷ್ಟ್ರ ಭಕ್ತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದ್ದರೆ ಸಾವರ್ಕರ್ ಅವರು ಎಷ್ಟೊಂದು ಧೀರ, ಅಪ್ರತಿಮ ಹೋರಾಟಗಾರ ಎಂಬುದು ಇವರಿಗೆ ಅರ್ಥವಾಗುತ್ತಿತ್ತು. ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೆ ಮತ್ತೆ ಸೋನಿಯಾ ಗಾಂಧಿಯವರ ಹೆಸರನ್ನಿಡಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದವರಿಗೆ ರಾಜಕೀಯ ಮಾಡಲು ಬೇಕಾದಷ್ಟು ಇತರ ವಿಷಯಗಳಿವೆ. ಆದರೆ ಸ್ವಾತಂತ್ರ ಹೋರಾಟಗಾರರ ವಿಷಯದಲ್ಲೂ ರಾಜಕೀಯ ಬೆರೆಸುತ್ತಿರುವುದು ಯಾರ ಓಲೈಕೆಗೆ? ಇನ್ನಾದರೂ ರಾಷ್ಟ್ರಭಕ್ತರ ವಿಚಾರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ವಿರೋಧಪಕ್ಷಗಳ ಮುಖಂಡರು ರಾಜಕೀಯ ಮಾಡದೇ ಗೌರವಪೂರ್ವಕವಾಗಿ ನಡೆದುಕೊಳ್ಳುವುದನ್ನು ಕಲಿಯುತ್ತಾರೆ ಎಂದು ನಿರೀಕ್ಷಿಸಬಹುದೇ? ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.