ADVERTISEMENT

ಎಲ್ಲ ತರಗತಿಗಳನ್ನು ಪ್ರಾರಂಭಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 17:58 IST
Last Updated 6 ಫೆಬ್ರುವರಿ 2021, 17:58 IST

ಬೆಂಗಳೂರು: ‘ಶಾಲಾ–ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, 1ರಿಂದ ದ್ವಿತೀಯ ಪಿಯುಸಿವರೆಗಿನ ಎಲ್ಲ ತರಗತಿಗಳನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ನಡೆಸಬೇಕು’ ಎಂದು ಸಾಂಸ್ಕೃತಿಕ ವಲಯದ ಪ್ರಮುಖರು ಹಾಗೂ ಸಾಹಿತಿಗಳು ಆಗ್ರಹಿಸಿದ್ದಾರೆ.

ಸರ್ಕಾರವು 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಅರ್ಧ ದಿನ ತರಗತಿಗಳನ್ನು ಪ್ರಾರಂಭಿಸಿದೆ. ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಕೋವಿಡ್‌ ಕಾರಣ ಶಾಲೆಗಳನ್ನು ಮುಚ್ಚಿದ ಪರಿಣಾಮ ರಾಜ್ಯದಲ್ಲಿ ಬಾಲ್ಯ ವಿವಾಹ, ಕಾರ್ಮಿಕ ಪದ್ಧತಿ, ಮಕ್ಕಳ ಸಾಗಣೆ ಹಾಗೂ ಭಿಕ್ಷಾಟನೆಯಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚಲಾರಂಭಿಸಿವೆ ಎಂದು ನ್ಯಾ.ಎಚ್‌.ಎನ್‌. ನಾಗಮೋಹನ್ ದಾಸ್, ಡಾ.ಜಿ. ರಾಮಕೃಷ್ಣ, ಕೆ. ಮರಳುಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ. ಸಿದ್ದನಗೌಡ ಪಾಟೀಲ, ವಸುಂದರಾ ಭೂಪತಿ, ವಿಜಯಾ, ಮಲ್ಲಿಕಾ ಘಂಟಿ, ಮಾವಳ್ಳಿ ಶಂಕರ್ ಸೇರಿದಂತೆ ಹಲವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಳೆದ ಎರಡು ತಿಂಗಳಿಂದ ಮಕ್ಕಳು, ಪಾಲಕರು, ಎಸ್‌ಡಿಎಂಸಿ ಹಾಗೂ ವಿವಿಧ ಸಂಘಟನೆಗಳು ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ನಿರಂತರವಾಗಿ ಅಭಿಯಾನ ನಡೆಸುತ್ತಿದ್ದಾರೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರವು ಮುಂಬರುವ ಸೋಮವಾರದಿಂದಲೇ ಎಲ್ಲ ತರಗತಿಗಳನ್ನು ಪ್ರಾರಂಭಿಸಿ, ಕಲಿಕೆಯ ಜತೆಗೆ ಬಿಸಿಯೂಟ ಮತ್ತು ಪೂರಕ ಮಾತ್ರೆಗಳನ್ನು ಒದಗಿಸಲು ಕ್ರಮವಹಿಸಬೇಕು. ಸರ್ಕಾರವು ತನ್ನ ಜವಾಬ್ದಾರಿಯ ಭಾಗವಾಗಿ ಇದನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.