ADVERTISEMENT

ಸಾವಿರಾರು ಶಿಕ್ಷಕರಿಗೆ ಅನ್ಯಾಯ–ಆಕ್ಷೇಪ

ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ ಸೀಮಿತ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:48 IST
Last Updated 22 ಮೇ 2019, 19:48 IST

ಬೆಂಗಳೂರು: 2014ರ ನಂತರ ನೇಮಕಗೊಂಡ ಶಿಕ್ಷಕರನ್ನು ಬಿಟ್ಟು ಉಳಿದ ಎಲ್ಲ ಶಿಕ್ಷಕರನ್ನೂ 1ರಿಂದ 5 ತರಗತಿಗಳ ಪ್ರಾಥಮಿಕ ಶಾಲಾ ಶಿಕ್ಷಕರೆಂದು ನಮೂದಿಸಬೇಕು ಎಂಬ ಸರ್ಕಾರಿ ಸುತ್ತೋಲೆಗೆ ರಾಜ್ಯದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆಯನಿರ್ದೇಶಕರು ಇದೇ 13ರಂದು ಈ ಸುತ್ತೋಲೆ ನೀಡಿದ್ದರು. ಇದನ್ನು ವಿರೋಧಿಸಿ ಹಾಗೂ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಇದೇ 30ರಂದು ಇಲ್ಲಿ ಸಭೆ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ.

‘ಸುಮಾರು 13 ವರ್ಷಗಳಿಂದ 1ರಿಂದ 8ನೇ ತರಗತಿಗೆ ತಮ್ಮ ಸೇವಾ ಅನುಭವ ಹಾಗೂ ವಿದ್ಯಾರ್ಹತೆಯ ಆಧಾರದ ಮೇಲೆ ಬೋಧನೆ ಮಾಡುತ್ತ ಬಂದಿರುವಶಿಕ್ಷಕರಿಗೆ ಇದರಿಂದ ಅನ್ಯಾಯವಾಗಲಿದೆ. ಹೀಗಾಗಿ ಈ ಸುತ್ತೋಲೆಯನ್ನುಹಿಂಪಡೆಯಬೇಕು. ಸರ್ಕಾರ ತನ್ನ ನಿಲುವನ್ನು ಸಡಿಲಿಸದೆ ಇದ್ದರೆ6ರಿಂದ 8ನೇ ತರಗತಿಗೆ ಬೋಧನೆ ಮಾಡದೆ ಇರುವ ನಿರ್ಧಾರಕ್ಕೂ ಶಿಕ್ಷಕರು ಬರಬೇಕಾಗಬಹುದು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅನ್ಯಾಯ ಆಗದು: ‘ಶಿಕ್ಷಕರ ಅಹವಾಲುಗಳ ಬಗ್ಗೆ ಇಲಾಖೆಗೆ ಅರಿವಿದೆ. ಇದೀಗ ನಡೆಯುತ್ತಿರುವ ಪದವೀಧರ ಶಿಕ್ಷಕರ ನೇಮಕಾತಿ ವೇಳೆ ಶೇ 25ರಷ್ಟನ್ನು ಇದೀಗ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಲ್ಲೇ ಪದವೀಧರರಿಗೆ ನೀಡುವಂತೆ ಸರ್ಕಾರ ನಿಯಮ ರೂಪಿಸಿದೆ. ಆ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಹೀಗಾಗಿ ಅನ್ಯಾಯ ಆಗಲಿದೆ ಎಂಬ ಆರೋಪ ಸಲ್ಲದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್‌.ಜಯಕುಮಾರ್‌ ತಿಳಿಸಿದರು.

‘ಪದವೀಧರ ಶಿಕ್ಷಕರ ನೇಮಕಾತಿ ನಿಯಮದಂತೆ ಈಗಿನ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ.ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಇಲ್ಲ’ ಎಂದರು.

***

ಅಂಕಿ–ಅಂಶ

ರಾಜ್ಯದಲ್ಲಿ 1.5 ಲಕ್ಷದಷ್ಟು ಪ್ರಾಥಮಿಕ ಶಾಲಾ ಶಿಕ್ಷಕರು

60 ಸಾವಿರಕ್ಕೂ ಅಧಿಕ ಮಂದಿ ಪದವೀಧರರು

ಬಡ್ತಿ ಪ್ರಕ್ರಿಯೆ ವೇಳೆ ಕೆಲವರಿಗಷ್ಟೇ ಪ್ರಯೋಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.