ADVERTISEMENT

ಮಹಾರಾಷ್ಟ್ರ ಸಂಸ್ಥೆಗೆ ಶಾಲಾ ಸಮವಸ್ತ್ರ ಪೂರೈಕೆ ಹೊಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 23:45 IST
Last Updated 1 ಜುಲೈ 2023, 23:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ (ಕೆಎಚ್‌ಡಿಸಿ) ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಾರಾಷ್ಟ್ರದ ವಿಲಾಪಚಂದ್‌ ಜೈನ್‌ ಸಂಸ್ಥೆಗೆ ಹೊಣೆಗಾರಿಕೆ ನೀಡಿದೆ.

ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಿಸಿದ ಆರೋಪ ನಿಗಮದ ಮೇಲಿದ್ದು, ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌. ಮುದ್ದಯ್ಯ ಅವರನ್ನು ಈಚೆಗೆ ಅಮಾನತುಗೊಳಿಸಲಾಗಿತ್ತು. 

2020–21ನೇ ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಲ್ಲಿ ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರ, ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್‌ ಸೇರಿ ಎರಡು ಜೊತೆ ಸಮವಸ್ತ್ರಕ್ಕೆ ಒಟ್ಟು 1.34 ಲಕ್ಷ ಮೀಟರ್‌ ಬಟ್ಟೆ‌ ಪೂರೈಸಲು ಶಿಕ್ಷಣ ಇಲಾಖೆಯು ನಿಗಮಕ್ಕೆ ಅನುಮತಿ ನೀಡಿತ್ತು. ಆದರೆ, ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದು ಎಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು.

ADVERTISEMENT

ಬಹುತೇಕ ಶಾಲೆಗಳಿಗೆ ಈಗಾಗಲೇ ಬಟ್ಟೆಗಳು ತಲುಪಿದೆ. ವಿತರಣೆಯಾಗದೇ ಇರುವ ಶಾಲೆಗಳಿಗೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿತರಿಸದೇ ಉಳಿದಿರುವ ಬಟ್ಟೆಯೂ ಸೇರಿ ಎರಡು ಜತೆ ಸಮವಸ್ತ್ರಗಳನ್ನು ತ್ವರಿತವಾಗಿ ಪೂರೈಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.