ADVERTISEMENT

ಬೆಳಗಾವಿ ಅಧಿವೇಶನ ರದ್ದತಿಗೆ ಸಚಿವಾಲಯ ನೌಕರರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 18:10 IST
Last Updated 1 ಡಿಸೆಂಬರ್ 2021, 18:10 IST
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ಹೊಸ ತಳಿಯ ಓಮೈಕ್ರಾನ್‌ ಕೊರೊನಾ ವೈರಾಣುವಿನ ಭೀತಿ ಇರುವುದರಿಂದ ಬೆಳಗಾವಿಯಲ್ಲಿ ನಡೆಯಲಿರುವವಿಧಾನಮಂಡಲದ ಅಧಿವೇಶನವನ್ನು ರದ್ದುಗೊಳಿಸಬೇಕು ಎಂದು ಸಚಿವಾಲಯ ನೌಕರರ ಸಂಘ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಗ್ರಹಿಸಿದೆ.

ಈ ಕುರಿತು ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಗುರುಸ್ವಾಮಿ, ‘ಬೆಳಗಾವಿಯು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯಲ್ಲಿದೆ. ಅಲ್ಲಿಗೆ ವಿದೇಶಿ ಪ್ರಯಾಣಿಕರು ಮತ್ತು ಅಂತರ್ ರಾಜ್ಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಂತಹ ಸ್ಥಳದಲ್ಲಿ ಶಾಸಕರು, ಸರ್ಕಾರಿ ಅಧಿಕಾರಿಗಳು, ನೌಕರರು ಬೃಹತ್‌ ಸಂಖ್ಯೆಯಲ್ಲಿ ಒಂದೇ ಕಡೆಯಲ್ಲಿ ಸೇರುವುದು ಓಮೈಕ್ರಾನ್‌ ವೈರಾಣು ಸೋಂಕು ಹರಡಲು ಕಾರಣವಾಗಬಹುದು. ಆದ್ದರಿಂದ ಮತ್ತೊಮ್ಮೆ ಪರಿಶೀಲಿಸಿ, ಡಿಸೆಂಬರ್‌ 13ರಿಂದ ಆರಂಭವಾಗಬೇಕಿರುವ ಅಧಿವೇಶನವನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ ನಿರ್ಧಾರ. ಆದರೆ, ಹೊಸ ತಳಿಯ ಕೊರೊನಾ ವೈರಾಣು ಹರಡುವ ಭೀತಿ ಇರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಜ್ಞರು ಸಲಹೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಆಧರಿಸಿ ಅಧಿವೇಶನ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.