ADVERTISEMENT

ಸೆಕ್ಯುಲರ್‌ಗಳೇ ದೇಶದ್ರೋಹಿಗಳು

ಜಾತ್ಯತೀತವಾದಿಗಳು ನಾಯಿಗಳು: ಜಗದೀಶ್‌ ಕಾರಂತ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 20:00 IST
Last Updated 15 ಡಿಸೆಂಬರ್ 2019, 20:00 IST
ಜಗದೀಶ್‌ ಕಾರಂತ್
ಜಗದೀಶ್‌ ಕಾರಂತ್   

ಬಳ್ಳಾರಿ: ‘ಶ್ರೀರಾಮನ ವಿರುದ್ಧವೇ ಬಾಬರ್‌ನನ್ನು ಎತ್ತಿಕಟ್ಟಿದ ಸೆಕ್ಯುಲರ್‌ ವಾದಿಗಳು ಪಾಪಿಗಳು. ಉಂಡ ಮನೆಗೆ ದ್ರೋಹ ಬಗೆಯುವ ನೀಚರು’ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತ ಪ್ರಾಂತ್ಯದ ಸಂಯೋಜಕ ಜಗದೀಶ್‌ ಕಾರಂತ ಜರಿದರು.

ವೇದಿಕೆಯ ಉತ್ತರ ಕರ್ನಾಟಕ ಪ್ರತಿನಿಧಿಗಳ ಎರಡನೇ ತ್ರೈವಾರ್ಷಿಕ ಸಮ್ಮೇಳನದ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಬಹಿರಂಗ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಕ್ರೈಸ್ತ ರಾಷ್ಟ್ರಗಳ ನೆರವಿನಿಂದ ಹಿಂದುತ್ವವನ್ನು ಕೊಲ್ಲುವ ತಂತ್ರ ರೂಪಿಸಿದ ಇಸ್ಲಾಂ ರಾಷ್ಟ್ರಗಳು ಅದಕ್ಕಾಗಿಯೇ ಸೆಕ್ಯುಲರ್‌ವಾದಿಗಳೆಂಬ ದಲ್ಲಾಳಿಗಳನ್ನು ನೇಮಿಸಿತು. ಅಯೋಧ್ಯೆ ವಿವಾದದ ಸುಪ್ರೀಂ ಕೋರ್ಟ್‌ ತೀರ್ಪು ಶ್ರೀರಾಮನ ಪರವಾಗಿ ಬಂದಾಗ ದೇಶ ಮತೀಯ ನೆಲೆಯಲ್ಲಿ ವಿಭಜನೆಯಾಗುತ್ತದೆ ಎಂದು ಸೆಕ್ಯುಲರ್ ನಾಯಿಗಳು ಬೊಬ್ಬೆ ಹಾಕಿದವು. ಆದರೆ ಏನೂ ಆಗಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬಳ್ಳಾರಿ ಪಕ್ಕದ ಸಿಂಧನೂರಿನಲ್ಲೇ ಇಪ್ಪತ್ತು ಸಾವಿರ ಬಾಂಗ್ಲಾ ದೇಶಿಗರಿದ್ದಾರೆ. ಅವರಿಗೆ ಪೌರತ್ವ ನೀಡುವುದು ಎಂದರೆ ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವುದು ಎನ್ನುತ್ತಾರೆ ಸೆಕ್ಯುಲರ್ ನಾಯಿಗಳು. ಆದರೆ ಅವರೇ 1947ರಲ್ಲಿ ರಲ್ಲಿ ಮತೀಯ ನೆಲೆಯಲ್ಲಿ ದೇಶವನ್ನು ವಿಭಜಿಸಿದ ಪಾಪಿಗಳು’ ಎಂದರು.

ADVERTISEMENT

‘ನನ್ನನ್ನು ಕತ್ತೆ ಎನ್ನಿ, ಆದರೆ ಹಿಂದೂ ಎನ್ನಬೇಡಿ ಎಂದು ನೆಹರು ಹೇಳಿದ್ದರು. ಸಂಸತ್ತಿನಲ್ಲೂ, ಭಾರತದ ನೆಲದಲ್ಲಿ ಭಗವಾಧ್ಚಜ ಹಾರಿಸಲು ಅವಕಾಶ ಕೊಡಲ್ಲ. ಜಗತ್ತಿನ ಇತರೆ ರಾಷ್ಟ್ರಗಳ ಸಹಾಯ ಪಡೆದು ಹಿಂದೂಗಳನ್ನು ಮೆಟ್ಟಿಹಾಕುವೆ ಎಂದು 1950ರಲ್ಲಿ ಸೊಕ್ಕಿನಿಂದ ಹೇಳಿದ್ದರು. ಇದು 2019. ಜಾತ್ಯತೀತವಾದದ ಹೆಸರಿನಲ್ಲಿ ಆಡಬಾರದ ಆಟವಾಡಿ ಸೊಕ್ಕಿ ಬೀಗಿದ್ದವರ ಧ್ವನಿ ಈಗ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಸೆಕ್ಯುಲರ್‌ ರಕ್ಕಸರ ಕೈಯಲ್ಲಿ ದೇಶವಿದ್ದಾಗಲೇ ಭಯೋತ್ಪಾದಕ ಸಂಘಟನೆಗಳು ರಕ್ತಪಾತ ನಡೆಸಲು ಸಾಧ್ಯವಾಗಿದ್ದು. ಹಿಂದುತ್ವದ ಮಂತ್ರದೊಂದಿಗೆ ಜನತೆ ಮೈಕೊಡವಿ ನಿಂತಿತು. ಆರು ವರ್ಷದಲ್ಲಿ
ಒಂದೇ ಒಂದು ಭಯೋತ್ಪಾದಕ ಚಟುವಟಿಕೆ ನಡೆದ ಉದಾಹರಣೆ ಇದೆಯೇ? ಜಿಸ್ ಕಿ ಲಾಠಿ, ಉಸೀ ಕಿ ಭೈಂಸ್‌ (ಯಾರ ಬಳಿ ದೊಣ್ಣೆ ಇದೆಯೋ, ಎಮ್ಮೆ ಅವರದ್ದೇ)’ ಎಂಬ ಗಾದೆ ಮಾತನ್ನು ಹೇಳಿ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.