ಬೆಂಗಳೂರು: ‘ಕನ್ನಡಪ್ರಭ’ ದಿನಪತ್ರಿಕೆಯ ಮಾಜಿ ಸಂಪಾದಕ ಕೆ. ಸತ್ಯನಾರಾಯಣ (87) ಅವರು ಭಾನುವಾರ ಜಯನಗರದ ಎಲ್ಐಸಿ ಕಾಲೋನಿ ನಿವಾಸದಲ್ಲಿ ನಿಧನರಾದರು.
ಕೆಲ ಕಾಲದಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಮೃತರಿಗೆ ಪತ್ನಿ ವೆಂಕಮ್ಮ ಹಾಗೂ ಪುತ್ರಿ ಅಪೂರ್ವ ಇದ್ದಾರೆ.
ಪತ್ರಿಕಾ ವಲಯದಲ್ಲಿ ‘ಸತ್ಯ’ ಎಂದೇ ಹೆಸರುವಾಸಿಯಾಗಿದ್ದ ಅವರು, ‘ತಾಯಿನಾಡು’ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಮೂರು ದಶಕ ಅವರು ಕಾರ್ಯನಿರ್ವಹಿಸಿದ್ದರು.
ಸತ್ಯನಾರಾಯಣ ಅವರು ತಮ್ಮ ಅಂಕಣಗಳ ಮೂಲಕ ರಾಜ್ಯ ಮತ್ತು ದೇಶದ ಸಮಕಾಲೀನ ರಾಜಕೀಯ, ವಾಣಿಜ್ಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ‘ಟಿಎಸ್ಸಾರ್ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಣಕಾಸು, ಬಜೆಟ್ ವಿಷಯಗಳ ವರದಿಗಾರಿಕೆಯಲ್ಲಿ ಪರಿಣತರಾಗಿದ್ದರು. ಸಂಜೆ ಚಾಮರಾಜಪೇಟೆಯ ಸ್ಮಶಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.