ADVERTISEMENT

ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತ ಬಾಲಕಿಯರ ವೈದ್ಯಕೀಯ ಪರೀಕ್ಷೆ, ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 19:34 IST
Last Updated 28 ಆಗಸ್ಟ್ 2022, 19:34 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖ ಲಾದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸಂತ್ರಸ್ತ ಬಾಲಕಿಯರನ್ನು ಭಾನುವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಮುರುಘಾ ಮಠದಲ್ಲಿ ಬಂಧನ ಭೀತಿಯ ವಾತಾವರಣ ನಿರ್ಮಾಣವಾ ಗಿದ್ದು, ತುರುಸಿನ ಬೆಳವಣಿಗೆಗಳು ನಡೆಯುತ್ತಿವೆ. ಶಿವಮೂರ್ತಿ ಶರಣರು ಮಠದಲ್ಲೇ ಇದ್ದು ಭಕ್ತರು, ಬೆಂಬಲಿಗರು ಭೇಟಿ ಮಾಡಿ ಚರ್ಚಿ ಸಿದ್ದಾರೆ. ಶರಣರ ಪರ ಮತ್ತು ವಿರುದ್ಧ ಪ್ರತಿಭಟನೆಗಳು ನಡೆದವು. ಪ್ರಕರಣದ ಸಂಬಂಧ ಯಾರನ್ನೂ ಪೊಲೀಸರು ಇದುವರೆಗೆ ವಶಕ್ಕೆ ಪಡೆದಿಲ್ಲ.

ಸಂತ್ರಸ್ತರ ಹೇಳಿಕೆ ದಾಖಲು: ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತ ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಭಾನುವಾರ ನಸುಕಿನಲ್ಲಿ ಕರೆತರಲಾಗಿದ್ದು, ಇವರಿಗೆ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡ ಲಾಯಿತು.

ADVERTISEMENT

ಮಕ್ಕಳ ಕಲ್ಯಾಣ ಸಮಿತಿಯ ಸಮಾಲೋಚಕರು ಮತ್ತು ಮಹಿಳಾ ಪೊಲೀಸರು ಬಾಲಕಿಯರ ಹೇಳಿಕೆ ಯನ್ನು ದಾಖಲಿಸಿಕೊಂಡರು. ಮೈಸೂರಿ ನಲ್ಲಿ ನೀಡಿದ ಹೇಳಿಕೆಯನ್ನೇ ಸಮಿತಿಯ ಎದುರು ಸಂತ್ರಸ್ತರು ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಂತ್ರಸ್ತ ಬಾಲಕಿಯರ ಪೋಷಕರೂ ಹೇಳಿಕೆ ದಾಖಲಿಸಿದ್ದಾರೆ.

ವಾಗ್ವಾದ: ಮಕ್ಕಳ ನೆರವಿಗೆ ಧಾವಿಸಿದ್ದ ಒಡನಾಡಿ ಸೇವಾ ಸಂಸ್ಥೆಯ ಸಿಬ್ಬಂದಿ ಹೊರಗಿಟ್ಟು ಹೇಳಿಕೆ ದಾಖಲಿಸಿ ಕೊಳ್ಳುವ ಪ್ರಯತ್ನವೂ ನಡೆಯಿತು. ಇದಕ್ಕೆ ಆಕ್ಷೇಪಿಸಿದಾಗ ವಾಗ್ವಾದ ನಡೆ ಯಿತು. ಸರ್ಕಾರಿ ಅಭಿಯೋಜಕರ ಸಲಹೆ, ಸಂತ್ರಸ್ತ ಬಾಲಕಿಯರ ಅಪೇಕ್ಷೆಯ ಮೇರೆಗೆ ಒಡನಾಡಿ ಸೇವಾ ಸಂಸ್ಥೆಯ ಪ್ರತಿನಿಧಿಗಳ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಬೆಳಿಗ್ಗೆ 11ಕ್ಕೆ ಬಾಲಭವನ ಪ್ರವೇಶಿಸಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಸಂಜೆ 4ಕ್ಕೆ ಸಂತ್ರಸ್ತ ಬಾಲಕಿಯರನ್ನು ಹೊರಗೆ ಕರೆತಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ಬಾಲಮಂದಿರಕ್ಕೆ ಕಳುಹಿಸಲಾಯಿತು.

ಸಾಕ್ಷ್ಯಾಧಾರ ಸಂಗ್ರಹ ಶುರು: ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಪೊಲೀಸರ ಮತ್ತೊಂದು ತಂಡ ಕಾರ್ಯನಿರತವಾಗಿತ್ತು. ತನಿಖಾಧಿಕಾರಿ ಡಿವೈಎಸ್‌ಪಿ ಅನಿಲ್‌ಕುಮಾರ್‌ ಮಾರ್ಗದರ್ಶನದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪೂರಕ ಸಾಕ್ಷ್ಯ ಕಲೆಹಾಕುವಲ್ಲಿ ಪ್ರಯತ್ನ ನಡೆಸಿತು.

ಕೃತ್ಯ ನಡೆದ ಸ್ಥಳದ ಮಹಜರು, ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಸೋಮವಾರ ನಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ದಂಪತಿ ವಿರುದ್ಧದ ಲೈಂಗಿಕ ಕಿರುಕುಳ ಹಾಗೂ ಮಕ್ಕಳ ಅಪಹರಣ ಪ್ರಕರಣದ ತನಿಖೆ ಶುರುವಾಗಿಲ್ಲ. ಬಸವರಾಜನ್‌ ಮನೆಗೆ ಬೀಗ ಹಾಕಿದ್ದು, ದಂಪತಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

*
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಸತ್ಯಾಂಶ ತನಿಖೆಯ ನಂತರ ಹೊರಬರಲಿದೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.