ADVERTISEMENT

ಹಣ ಪಡೆದು ಬಿಜೆಪಿ ಸೇರಿದ ಶಾಸಕ ಜಾಧವ್‌: ಶಾಮನೂರು ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 18:24 IST
Last Updated 4 ಮಾರ್ಚ್ 2019, 18:24 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ಬಿಜೆಪಿಯವರಿಂದ ಮೊದಲೇ ಹಣ ಪಡೆದಿರುವುದರಿಂದಲೇ ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರು ಸೋಮವಾರ ಈ ಕುರಿತು ಕೇಳಿದ ಪ್ರಶ್ನೆಗೆ ‘ಉಮೇಶ್‌ ಜಾಧವ್‌ ಹೋಗುತ್ತಾನೆ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಅದು ಮೊದಲೇ ಫಿಕ್ಸ್‌ ಆಗಿತ್ತು’ ಎಂದು ಉತ್ತರಿಸಿದರು.

ಮಲ್ಲಿಕಾರ್ಜುನ ಖರ್ಗೆ ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಕೇಳಿದಾಗ, ‘ನಾವು ಎಲ್ಲರೂ ಹಾಗೆಯೇ ಹೇಳುತ್ತಿರುತ್ತೇವೆ. ಗೆದ್ದ ಮೇಲೆ ಮತ್ತೆ ಟಿಕೆಟ್‌ ಬೇಕು ಎಂದು ಹೊಯ್ಕೋತೇವೆ. ಗೆದ್ದ ಮೇಲೆ ನೋಡೋಣ’ ಎಂದು ನಗೆ ಬೀರಿದರು.

ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಟಿಕೆಟ್‌ ಹೊಂದಾಣಿಕೆ ಕುರಿತ ಪ್ರಶ್ನೆಗೆ, ‘ಎಲ್ಲವೂ ಬಗೆಹರಿಯುತ್ತದೆ. ಮೊದಲು ಚುನಾವಣೆ ಬರಲಿ’ ಎಂದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಕೊಡುತ್ತಾರೆ ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ’ ಎಂದು ಸುದ್ದಿಗಾರರು ಕೇಳಿದಾಗ, ‘ಚುನಾವಣೆ ಘೋಷಣೆ ಆದ ಮೇಲೆ ಕಾರ್ಯಕರ್ತರ ನಡುವಿನ ಗೊಂದಲ ಎಲ್ಲಾ ಸರಿ ಹೋಗುತ್ತದೆ. ಜೆಡಿಎಸ್‌–ಕಾಂಗ್ರೆಸ್‌ ಸೇರಿ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು.

‘ಸಂಸದ ಜಿ.ಎಂ. ಸಿದ್ದೇಶ್ವರ ಒಂದು ಲಕ್ಷ ಬಹುಮತದಿಂದ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ’ ಎಂಬ ಬಗ್ಗೆ ಗಮನ ಸೆಳೆದಾಗ, ‘ಚುನಾವಣೆಗೆ ನಿಂತವರೆಲ್ಲರೂ ಹೀಗೆ ಹೇಳುತ್ತಾರೆ. ಇದು ಅವರ ಕೊನೆಯ ಚುನಾವಣೆಯೋ ಅಥವಾ ಜನರೇ ಕಳುಹಿಸುತ್ತಾರೋ; ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.