ತುಮಕೂರು: ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಟ್ಟ ಸಮಯದಿಂದ ಅವರನ್ನು ಕ್ರಿಯಾ ಸಮಾಧಿಗೆ ಕರೆದೊಯ್ಯುವವರೆಗೂ ನಡೆದ ಭಜನೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ಬದುಕು ಮತ್ತು ಸಾಧನೆ ಪ್ರತಿಬಿಂಬಿಸಿತು.
ಅದರಲ್ಲಿಯೂ ಮಠದ ಅಂಧರ ಶಾಲೆಯ ಮಕ್ಕಳು ನಡೆಸಿಕೊಟ್ಟ ಭಜನೆ ಎಲ್ಲರ ಗಮನ ಸೆಳೆಯಿತು. ‘ಶಿವಕುಮಾರ ಪ್ರಭುವೇ, ಬಡವರಿಗೆ ಬೆಳಕು ನೀಡಿದ ಗುರುವೇ’ ಎಂದು ಹಾಡಿದಾಗ ವೇದಿಕೆಯಲ್ಲಿದ್ದವರು ಮಠಾಧೀಶರು ಭಾವುಕರಾದರು. ಈ ಮಕ್ಕಳು ಸೋಮವಾರ ನಡುರಾತ್ರಿಯ ಕೊರೆಯುವ ಚಳಿಯಲ್ಲಿಯೇ ಭಜನೆ ಆರಂಭಿಸಿದ್ದರು. ಹಿರಿಯ ಕಲಾವಿದ ಲಕ್ಷ್ಮಣದಾಸ್ ಶಿವಕುಮಾರ ಸ್ವಾಮೀಜಿ ಅವರ ಕುರಿತು ಹರಿಕಥೆ ನಡೆಸಿಕೊಟ್ಟರು.
ರುದ್ರಾಕ್ಷಿ ರಥದಲ್ಲಿ ಮೆರವಣಿಗೆ: ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ಗೋಸಲ ಸಿದ್ಧೇಶ್ವರ ವೇದಿಕೆಯಿಂದ ಕ್ರಿಯಾ ಸಮಾಧಿಯ ಸ್ಥಳದವರೆಗೆ ಸ್ವಾಮೀಜಿ ಅವರ ಲಿಂಗ ಶರೀರವನ್ನು ರುದ್ರಾಕ್ಷಿ ರಥದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ಸಿದ್ಧಲಿಂಗ ಸ್ವಾಮೀಜಿ ಅವರು ಆರತಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.