ADVERTISEMENT

ಹೆಬ್ಬಾರ್‌ ಫೇಸ್‌ಬುಕ್‌ ಪೋಸ್ಟ್‌: ದೇಶಪಾಂಡೆ ವಿರುದ್ಧ ಗುಡುಗು,ಮತದಾರರಲ್ಲಿ ಕ್ಷಮೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 4:19 IST
Last Updated 15 ಜುಲೈ 2019, 4:19 IST
   

ಕಾರವಾರ: ಅತೃಪ್ತರ ಬಣದಲ್ಲಿರುವ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ, ತಮ್ಮ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರ ಕ್ಷಮೆ ಯಾಚಿಸಿದ್ದಾರೆ. ಸಚಿವ ಆರ್.ವಿ.ದೇಶಪಾಂಡೆ ವಿರುದ್ಧವೂ ಅಸಮಾಧಾನ ಹೊರಹಾಕಿದ್ದು, ತಮ್ಮ ಪಕ್ಷದ ಮತ್ತೊಬ್ಬ ಶಾಸಕರ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನೂ ಅವರು ತೋರಲಿಲ್ಲ ಎಂದು ದೂರಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೇನು ಕಾರಣ ಎಂದು ಇದೇ ಮೊದಲ ಬಾರಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

'ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ, ಇಂಥ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ ಅಥವಾ ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ' ಎಂದು ಬರೆದಿದ್ದಾರೆ.

ADVERTISEMENT

'ಮಾನ್ಯರೇ, ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರವಲ್ಲಿ ಯಶಸ್ಸು ಕಾಣಲಿಲ್ಲ.

ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರೂ ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ತೋರಿಸಲಿಲ್ಲ‌ ಹಾಗೂ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಂತೂ ಜಿಲ್ಲೆಯಿಂದ ಆರಿಸಿಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ'. ಎಂದು ಬರೆದಿದ್ದಾರೆ.

'ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು, ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ಖಂಡಿತವಾಗಿಯೂ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ' ಎಂದೂ ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.