ADVERTISEMENT

ಶ್ರವಣಬೆಳಗೊಳದ ಬೋಳು ಬೆಟ್ಟದಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 31 ಮೇ 2020, 15:00 IST
Last Updated 31 ಮೇ 2020, 15:00 IST
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟಕ್ಕೆ ಹೊಂದಿಕೊಂಡಂತಿರುವ ಬೋಳು ಬೆಟ್ಟದ ಬಂಡೆ ಬಿರುಕು ಬಿಟ್ಟಿರುವುದು
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟಕ್ಕೆ ಹೊಂದಿಕೊಂಡಂತಿರುವ ಬೋಳು ಬೆಟ್ಟದ ಬಂಡೆ ಬಿರುಕು ಬಿಟ್ಟಿರುವುದು   

ಶ್ರವಣಬೆಳಗೊಳ: 2,300 ವರ್ಷಗಳ ಪ್ರಾಚೀನ ಇತಿಹಾಸ ಇರುವ ಚಂದ್ರಗಿರಿಯ ಚಿಕ್ಕಬೆಟ್ಟಕ್ಕೆ ಹೊಂದಿಕೊಂಡಂತಿರುವ ಬೋಳು ಬೆಟ್ಟದಲ್ಲಿ ಗುಡುಗು ಸಿಡಿಲ ಅಬ್ಬರಕ್ಕೆ ಬಂಡೆ ಬಿರುಕು ಬಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಈ ಬೋಳು ಬೆಟ್ಟದಲ್ಲಿ ಸಲ್ಲೇಖನ ಸಮಾಧಿ ಮರಣ ಹೊಂದಿರುವ ಎರಡು ಮಂಟಪಗಳಿವೆ. ಅದರ ಅನತಿ ದೂರದಲ್ಲಿರುವ ಇಳಿಜಾರು ನೆಲ ಹಾಸಿನ ಕಲ್ಲಿನ ಪ್ರದೇಶದಲ್ಲಿ ಸಿಡಿಲು ಬಡಿದು ಸುಮಾರು 2 ಇಂಚಿನಷ್ಟು ಅಗಲದ, 60 ಅಡಿ ಉದ್ದದ, 20 ಅಡಿ ಆಳದ ಬಿರುಕು ಕಾಣಿಸಿಕೊಂಡಿದೆ.

ಇಲ್ಲಿಯ ಮೇಲ್ಪದರದಲ್ಲಿ ಓಡಾಡಿದಾಗ ಟೊಳ್ಳು ಶಬ್ದ ಕೇಳಿ ಬರುತ್ತಿದೆ. ಬಂಡೆ ಸೀಳಿದ್ದು ತೆಳುವಾದ ಚಕ್ಕೆಯ ತರಹ ಕಲ್ಲುಗಳು ಎದ್ದು ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ADVERTISEMENT

ಇಲ್ಲಿಯ ಆಜುಬಾಜಿನ ಜಮೀನಿನ ರೈತರಾದ ಜಿ.ಪಿ.ನಾಗರಾಜ್‌, ಮತ್ತು ಶೋಭಾ ಅವರು 2 ದಿನಗಳ ಹಿಂದೆ ಇಲ್ಲಿ ಸಿಡಿಲಿನ ರೀತಿಯ ಶಬ್ದ ಕೇಳಿ ಬಂದಿತ್ತು ಎಂದು ತಿಳಿಸಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಸಹಾಯಕ ಸಂರಕ್ಷಕ ಕಾಮತ್‌ ಅವರು ಇದಕ್ಕೆ ಪ್ರತಿಕ್ರಿಯಿಸಿ, ‘ಚಿಕ್ಕಬೆಟ್ಟದ ಚಂದ್ರಗಿರಿಯ ಪಾರ್ಶ್ವನಾಥ, ಚಂದ್ರಗುಪ್ತ, ಚಾವುಂಡರಾಯ ಬಸದಿಗಳು ಮತ್ತು ಪಟ್ಟಣದ ಅಕ್ಕನ ಬಸದಿಗಳು ಮತ್ತು ವಿಂಧ್ಯಗಿರಿಯ ಬಾಹುಬಲಿ ಸ್ವಾಮಿಯ ಪ್ರದೇಶ ಮಾತ್ರ ನಮ್ಮ ವ್ಯಾಪ್ತಿಗೆ ಒಳಪಟ್ಟಿದೆ. ಬೋಳುಬೆಟ್ಟ ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೇಳಿದರು.

ಗಣಿ ಮತ್ತು ಭೂಗರ್ಭ ಇಲಾಖೆಯ ನಿವೃತ್ತ ಡ್ರಿಲ್ಲಿಂಗ್‌ ಎಂಜಿನಿಯರ್‌ ದೇವೇಂದ್ರ ಸ್ವಾಮಿ ಮಾತನಾಡಿ, ರಾಷ್ಟ್ರೀಯ ಶಿಲಾ ಸಂಸ್ಥೆಯು ಪರಿಶೀಲಿಸುವುದು ಸೂಕ್ತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.