ADVERTISEMENT

ರಾಜಕೀಯದಲ್ಲಿ 50 ವರ್ಷ; ಮಾರ್ಚ್ 17ಕ್ಕೆ ನಿವೃತ್ತಿ ಘೋಷಣೆ: ಶ್ರೀನಿವಾಸ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 9:01 IST
Last Updated 3 ಅಕ್ಟೋಬರ್ 2023, 9:01 IST
ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್   

ಚಾಮರಾಜನಗರ: ‘ಮುಂದಿನ ವರ್ಷದ ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗಲಿದೆ. ಅಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಂತರ ಯಾವ ರಾಜಕೀಯ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವುದಿಲ್ಲ. ಮುಂದಿನ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ’ ಎಂದರು.

‘ಇಷ್ಟು ವರ್ಷದ ರಾಜಕಾರಣ ನನಗೆ ತೃಪ್ತಿಯಿದೆ. ಇನ್ನು ಮುಂದೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲವನ್ನೂ ಗಮನಿಸುತ್ತೇನೆ ಅಷ್ಟೆ’ ಎಂದರು.

ADVERTISEMENT

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈತ್ರಿ ಕುರಿತು ಬೊಬ್ಬೆ ಹಾಕುವುದು ಸರಿಯಲ್ಲ. ‘ಇಂಡಿಯಾ’ ಎಂದು ಮೈತ್ರಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ವಿರೋಧಿಸುವ 30 ಪಕ್ಷಗಳು ‘ಇಂಡಿಯಾ’ ಹೆಸರಿನಲ್ಲಿ ಒಂದಾಗಬಹುದು. ಇವರಿಬ್ಬರು ಒಂದಾಗಬಾರದಾ? ಜೆಡಿಎಸ್ ಬಿಜೆಪಿ-ಮೈತ್ರಿ ಜನಾದೇಶಕ್ಕೆ ಬಿಟ್ಟದ್ದು’ ಎಂದರು.

ಶಿವಮೊಗ್ಗ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್, ‘ಗಲಭೆ ಹೊಸದಾಗಿ ಆಗುತ್ತಿದೆಯೇ? ಯಾವ ಸರ್ಕಾರ ಬಂದರೂ ಯಾವುದಾದರೂ ಒಂದು ಕಡೆ ಕೋಮು ಗಲಭೆ ಆಗುತ್ತದೆ. ಅದೇ ರೀತಿ ಶಿವಮೊಗ್ಗದಲ್ಲಿ ಅಹಿತಕರ ಘಟನೆ ಆಗಿದೆ. ಈಗ ಶಾಂತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.