ADVERTISEMENT

ಆರೋಪಿ ರಮೇಶ ಜಾರಕಿಹೊಳಿಗೆ ಬಸವರಾಜ ಬೊಮ್ಮಾಯಿ ರಕ್ಷಣೆ– ಸಿದ್ದರಾಮಯ್ಯ ಆರೋಪ

‘ಗೃಹ ಸಚಿವರಾಗಿ ಮುಂದುವರೆಯಲು ಬೊಮ್ಮಾಯಿಗೆ ನೈತಿಕತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 27 ಮೇ 2021, 20:51 IST
Last Updated 27 ಮೇ 2021, 20:51 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಸಿ.ಡಿ ಪ್ರಕರಣದ ಆರೋಪಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಕ್ಷಣೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಗೃಹ ಸಚಿವರಾಗಿ ಮುಂದುವರೆಯಲು ಬೊಮ್ಮಾಯಿಗೆ ಯಾವುದೇ ನೈತಿಕತೆ ಇಲ್ಲ. ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣದ ಬಗ್ಗೆ ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಆರೋಪಿಯನ್ನು ತಕ್ಷಣ ಬಂಧಿಸಬೇಕು. ರಮೇಶ ಜಾರಕಿಹೊಳಿ ರಕ್ಷಣೆಗೆ ನಿಂತಿರುವ ಸಚಿವರ ಬಗ್ಗೆ ತನಿಖೆ ಆಗಬೇಕು. ರಮೇಶ ಜಾರಕಿಹೊಳಿ ಅವರನ್ನು ಬಂಧಿಸದಿದ್ದರೆ ಮಹಿಳೆಯರಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಗೊತ್ತಾಗುತ್ತೆ’ ಎಂದರು.

‘ಸರ್ಕಾರದ ಸಂಪೂರ್ಣ ರಕ್ಷಣೆ ಇದ್ದ ಕಾರಣ ಪೊಲೀಸರು ರಮೇಶ ಜಾರಕಿಹೊಳಿಯನ್ನು ಬಂಧಿಸಿಲ್ಲ. ಹೀಗಾಗಿ, ರಮೇಶ ಆರಾಮಾಗಿ ಓಡಾಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ರಮೇಶ ಜಾರಕಿಹೊಳಿಯನ್ನು ಬಂಧಿಸದಂತೆ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಇತ್ತೀಚೆಗೆ ಎಸ್‌ಐಟಿ ಮುಖ್ಯಸ್ಥ ಸೌಮೇಂಧು ಮುಖರ್ಜಿ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಈ ಮೂಲಕ, ಎಸ್‌ಐಟಿ ನಿಷ್ಕ್ರಿಯಗೊಳಿಸಲಾಗಿದೆ. ಮೇಲ್ನೋಟಕ್ಕೆ ಸರ್ಕಾರ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂಬುದು ತಿಳಿಯುತ್ತದೆ’ ಎಂದು ಆರೋಪಿಸಿದರು.

ADVERTISEMENT

‘ರಮೇಶ ಜಾರಕಿಹೊಳಿ ಅವರನ್ನು ಬಿಪಿ, ಶುಗರ್ ಪರೀಕ್ಷೆ ಮಾಡಿ ಕಳುಹಿಸಿದ್ದಾರೆ. ಇದುವರೆಗೂ ಡಿಎನ್‌ಎ ಟೆಸ್ಟ್ ಮಾಡಿಲ್ಲ. ಕಾನೂನು ಪ್ರಕರಣ ಡಿಎನ್‌ಎ ಪರೀಕ್ಷೆ ಮಾಡಬೇಕಿತ್ತು. ಇಂಥ ಪ್ರಕರಣಗಳಲ್ಲಿ ಆರೋಪಿಯ ಡಿಎನ್‌ಎ ಟೆಸ್ಟ್ ಮಾಡಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಆದರೆ, ರಮೇಶ ಜಾರಕಿಹೊಳಿಯ ರಕ್ಷಣೆಯನ್ನು ಸರ್ಕಾರ ಮಾಡುತ್ತಿದೆ. ಒಪ್ಪಿಗೆ ಮೇರೆ ಎಲ್ಲ ನಡೆದಿದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬರಲು ರಮೇಶ ಜಾರಕಿಹೊಳಿ ಕಾರಣವಾಗಿದ್ದಾರೆ. ಹೀಗಾಗಿ, ಅವರನ್ನು ಈವರೆಗೂ ಬಂಧಿಸಿಲ್ಲ’ ಎಂದು ದೂರಿದರು.

‘ನನಗೆ ಇರುವ ಮಾಹಿತಿ ಪ್ರಕಾರ, ಆರೋಪಿ‌ ಸ್ಥಾನದಲ್ಲಿ ಇರುವ ರಮೇಶ ಜಾರಕಿಹೊಳಿ ಶನಿವಾರ ಗೃಹ ಸಚಿವರನ್ನು ಹುಬ್ಬಳ್ಳಿಯಲ್ಲಿ ಭೇಟಿ‌ ಮಾಡಿ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿಮಾತನಾಡಿದ್ದಾರೆ. ಒಬ್ಬ ಅತ್ಯಾಚಾರ ಆರೋಪಿ ಗೃಹ ಸಚಿವರನ್ನು ಭೇಟಿ ಮಾಡಿರುವುದು ಇದೇ ಮೊದಲು.

ಆರಂಭದಲ್ಲಿ ವಿಡಿಯೊ ನಕಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದರು. ಇದೀಗ ವಿಡಿಯೊದಲ್ಲಿ ಇರುವುದು ನಾನೇ ಎಂದು ಹೇಳಿದ್ದಾರೆ. ನಾನು, ನಾನೇ - ಅವಳು, ಅವಳೇ ಎಂದಿದ್ದಾರೆ’ ಎಂದು ರಮೇಶ್ ಜಾರಕಿಹೊಳಿ ನಡೆಯನ್ನು ಸಿದ್ದರಾಮಯ್ಯ ಲೇವಡಿ ಮಾಡಿದರು.

ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ದಿನೇಶ್‌ ಕಲ್ಲಹಳ್ಳಿ ದೂರು ನೀಡಿದ ಕ್ಷಣದಿಂದ ಈವರೆಗೆ ನಡೆದ ಘಟನೆಗಳನ್ನು ನೆನೆಪಿಸಿಕೊಂಡ ಸಿದ್ದರಾಮಯ್ಯ. ‘ಸಂತ್ರಸ್ತ ಮಹಿಳೆ ಲಿಖಿತ ದೂರು ಕೂಡ ನೀಡುತ್ತಾಳೆ. ಮಾರ್ಚ್‌ 30ರಂದು ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಾಗುತ್ತದೆ. ರಮೇಶ ಜಾರಕಿಹೊಳಿ ಮಹಿಳೆಯ ನಂಬಿಕೆನ ದುರುಪಯೋಗ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಕೆಲಸ ಕೊಡಿಸುವುದಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿದೆ. ಕಾನೂನು ಪ್ರಕಾರ ರಮೇಶ ಜಾರಕಿಹೊಳಿಯನ್ನು ತಕ್ಷಣವೇ ಬಂಧಿಸಬೇಕಿತ್ತು. ದೇಶದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದ ಪ್ರಕರಣ ಇದು ಮಾತ್ರ ಎಂದು’ ಸಿದ್ದರಾಮಯ್ಯ ಹೇಳಿದರು.

ಬಂಧಿಸದಿದ್ದರೆ ಹೋರಾಟ: ಡಿಕೆಶಿ
‘ಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ರಾಜ್ಯದ ಮಹಿಳೆಯರ ಹಾಗೂ ಪೊಲೀಸ್ ಅಧಿಕಾರಿಗಳ ಆತ್ಮಗೌರವದ ರಕ್ಷಣೆಗಾಗಿ ಅತ್ಯಾಚಾರದ ಆರೋಪಿ ರಮೇಶ ಅವರನ್ನು ತಕ್ಷಣ ಬಂಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

‘ಈ ಪ್ರಕರಣ ಸಮ್ಮತಿಯಿಂದ ನಡೆದಿದೆಯೋ, ಬಲವಂತದಿಂದ ನಡೆದಿದೆಯೋ ಎಂದು ವಿಚಾರಣೆಯ ಬಳಿಕ ಕೋರ್ಟ್ ನಿರ್ಧರಿಸುತ್ತದೆ’ ಎಂದ ಅವರು, ‘ಆರೋಪಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.