ADVERTISEMENT

ಪ್ರಧಾನಿ ಮೋದಿ ಲಸಿಕೋತ್ಸವ ಜಾಹೀರಾತಿಗಷ್ಟೇ ಸೀಮಿತವಾಯಿತೇ: ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2021, 10:20 IST
Last Updated 14 ಜುಲೈ 2021, 10:20 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ಪ್ರಧಾನಿ ಮೋದಿಯವರ ಲಸಿಕೋತ್ಸವ ಜಾಹೀರಾತಿಗಷ್ಟೇ ಸೀಮಿತವಾಯಿತೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೋವಿಡ್‌ ಲಸಿಕೆ ಅಭಿಯಾನದ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಲಸಿಕೆ ಕೊರತೆಯಿಂದಾಗಿ ರಾಜ್ಯದ ಶೇಕಡಾ 50ರಷ್ಟು ಲಸಿಕೆ ಕೇಂದ್ರಗಳು ಸ್ಥಗಿತಗೊಂಡಿವೆ. ಕಳೆದ 14 ದಿನಗಳಲ್ಲಿ ಸರಾಸರಿ 2.56 ಲಕ್ಷ ಲಸಿಕೆಗಳನ್ನು ಮಾತ್ರ ನೀಡಲಾಗಿದೆ ಎಂಬ ವರದಿ ಕಳವಳಕಾರಿಯಾದುದು. ಪ್ರಧಾನಿ ನರೇಂದ್ರ ಮೋದಿ ಅವರ ಲಸಿಕೋತ್ಸವ ಜಾಹೀರಾತಿಗಷ್ಟೇ ಸೀಮಿತವಾಯಿತೇ?' ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ADVERTISEMENT

'ರಾಜ್ಯದ ಲಸಿಕಾ ಕೇಂದ್ರಕ್ಕೆ ಬರುವ 100 ಜನರಲ್ಲಿ 20 ಮಂದಿಗೆ ಲಸಿಕೆ ಸಿಗುತ್ತಿದೆ. ಬೇಡಿಕೆಯ ಶೇ 20 ಲಸಿಕೆಗಳೂ ಪೂರೈಕೆಯಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ವೈದ್ಯರು ಹೇಳುತ್ತಿದ್ದಾರೆ. ಇದರ ವಿರುದ್ಧ ಸೊಲ್ಲೆತ್ತಲಾಗದ ಅಸಮರ್ಥ ಯಡಿಯೂರಪ್ಪ ಮತ್ತು ಡಾ.ಸುಧಾಕರ್ ಅವರು ಅಸಹಾಯಕರಂತೆ ದೆಹಲಿ ಕಡೆ ಕೈತೋರಿಸುತ್ತಿದ್ದಾರೆ' ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಹತ್ತಕ್ಕಿಂತ ಹೆಚ್ಚು ಪತ್ರಗಳನ್ನು ರಾಜ್ಯ ಸರ್ಕಾರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳುತ್ತಾ ಬಂದಿರುವ ಕೇಂದ್ರ ಸರ್ಕಾರ ತನ್ನ ವೈಫಲ್ಯತೆಯನ್ನು ಒಪ್ಪಲಿದೆಯೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

'ರಾಜ್ಯದ 8500 ಲಸಿಕಾ ಕೇಂದ್ರಗಳಲ್ಲಿ ಬಹುಪಾಲು ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಲ್ಲಿ ಲಭ್ಯವಿರುವ ಲಸಿಕೆಗಳನ್ನು ಕೂಡಾ ರಾಜಕಾರಣಿಗಳು ಮತ್ತು ಪ್ರಭಾವಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತಿರುವ ದೂರುಗಳಿವೆ. ಲಸಿಕಾ ಆಕಾಂಕ್ಷಿಗಳು ಬೆಳಿಗ್ಗೆಯಿಂದ ಸಾಲಲ್ಲಿ ನಿಂತು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

'ಈಗಿನ ಅಂದಾಜಿನಂತೆ ರಾಜ್ಯದಲ್ಲಿ 4.97 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಎರಡು ಡೋಸ್‌ಗಳಂತೆ ಒಟ್ಟು 9.6 ಕೋಟಿ ಲಸಿಕೆಗಳು ಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಪೂರೈಸಿರುವುದು 2.6 ಕೋಟಿ ಲಸಿಕೆ ಮಾತ್ರ ಎಂದು ಆರೋಗ್ಯ ಇಲಾಖೆ ಹೇಳುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಒಂದೆಡೆ ಯುವಜನರನ್ನು ಗುರಿಯಾಗಿಟ್ಟುಕೊಂಡಿದೆಯೆನ್ನಲಾದ ಕೊರೊನಾ ಮೂರನೇ ಅಲೆಯ ಭೀತಿ, ಇನ್ನೊಂದೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಕಾಲೇಜುಗಳನ್ನು ತೆರೆಯಲು ಸರ್ಕಾರದ ಪ್ರಯತ್ನ. ಈ ಪರಿಸ್ಥಿತಿಯಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಪೂರ್ವ ಸಿದ್ಧತೆ ನಡೆಸಬೇಕಾಗಿದ್ದ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ' ಎಂದು ವಿರೋಧ ಪಕ್ಷದ ನಾಯಕ ತಿಳಿಸಿದ್ದಾರೆ.

'ಜುಲೈ ಅಂತ್ಯದೊಳಗೆ ದೇಶದಾದ್ಯಂತ 51.6 ಕೋಟಿ ಕೊರೊನಾ ಲಸಿಕೆಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಈ ಗುರಿ ಸಾಧನೆಗಾಗಿ ಪ್ರತಿದಿನ 70 ಲಕ್ಷ ಲಸಿಕೆ ನೀಡಬೇಕಾಗಿದ್ದರೂ ಈಗ 40 ಲಕ್ಷ ಲಸಿಕೆ ಮಾತ್ರ ನೀಡಲಾಗುತ್ತಿದೆ. ಇಲ್ಲಿಯ ವರೆಗೆ 38.5 ಕೋಟಿ ಲಸಿಕೆಗಳನ್ನಷ್ಟೇ ನೀಡಲಾಗಿದೆ' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ರಾಜ್ಯಗಳು ಲಸಿಕೆ ಹಾಕುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಈ ಹೊಣೆಯನ್ನು ತನ್ನ ತಲೆ ಮೇಲೆ ಹೊತ್ತುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಆಶ್ವಾಸನೆ, ಅವರ ಎಂದಿನ ಸುಳ್ಳಿನ ಸರಮಾಲೆಗೆ ಇನ್ನೊಂದು ಹೊಸ ಸುಳ್ಳಿನ ಸೇರ್ಪಡೆ ಅಷ್ಟೆ' ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.