ಹುಬ್ಬಳ್ಳಿ:ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ಭಾನುವಾರ ಹುಬ್ಬಳ್ಳಿಯ ಬಿಜೆಪಿ ಸಮಾವೇಶದಲ್ಲಿ ರಫೇಲ್ ಬಗ್ಗೆ ದೇಶದ ಚೌಕಿದಾರ ಮಾತಾಡಿಲ್ಲ. ರೈತರ ಸಾಲದ ಬಗ್ಗೆ ಮಾತನಾಡಿದ್ದಾರೆ. ರೈತರ ಸಾಲವನ್ನು ಅವರೇಕೆ ಮನ್ನಾ ಮಾಡಿಲ್ಲ..? ರೈತರ ಸಾಲಮನ್ನಾ ಮಾಡುವಂತೆ ಎರಡು ಬಾರಿ ನಿಯೋಗ ಹೋಗಿದ್ದೆ. ಅವರು ಇದುವರೆಗೆ ರೈತರ ಸಾಲಮನ್ನಾ ಮಾಡಿಲ್ಲ. ನಾವು ಈ ವರ್ಷದ ಬಜೆಟ್ನಲ್ಲಿ ಸಾಲಮನ್ನಾಕ್ಕೆ ಹಣ ಇಟ್ಟಿದ್ದೇವೆ. ಮೋದಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಗೊತ್ತಿಲ್ಲ’ ಎಂದು ಟೀಕಿಸಿದರು.
ಅಧಿವೇಶನಕ್ಕೆ ನಾಲ್ವರು ಕಾಂಗ್ರೆಸ್ ಶಾಸಕರು ಬಂದಿಲ್ಲ. ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ಗೆ ಮನವಿ ಮಾಡುತ್ತೇವೆ ಎಂದರು.
ಯಡಿಯೂರಪ್ಪ ಕೂಡಲೇ ರಾಜೀನಾಮೆ ಕೊಡಬೇಕು. ಅವರಿಗೆ ಸಾರ್ವಜನಿಕ ಜೀವನದಲ್ಲಿರಲು ನೈತಿಕತೆಯಿಲ್ಲ. ಮೊದಲು ಮಿಮಿಕ್ರಿ ಮಾಡಲಾಗಿದೆ ಅಂತ ಅಂದ್ರು.... ಸಾಬೀತುಪಡಿಸಿದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ರು. ಈಗ ನನ್ನದೇ ಧ್ವನಿ ಅಂದಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಶರಣಗೌಡಗೆ ಏನು ಹೇಳಿದಾರೆ ಹೇಳ್ಲಾ..? ಹತ್ತು ಕೋಟಿ ನಿಮ್ಮಪ್ಪನಿಗೆ ಕೊಡ್ತೀವಿ, ಮಂತ್ರಿ ಮಾಡ್ತೀವಿ. ನಿಂಗೆ ಟಿಕೆಟ್ ಕೊಡ್ತೀವಿ ಅಂದಿದಾರೆ. ಕುದುರೆ ವ್ಯಾಪಾರ ಅಲ್ವಾ ಅದು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಆಗಿದ್ದವರು ಶಾಸಕರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಇವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಎಂದು ಸಿದ್ದರಾಮಯ್ಯ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.