ಬೆಂಗಳೂರು: ಖಾಸಗಿ ಆಸ್ಪತ್ರೆಗಳು ನೀಡುವ ಕೋವಿಡ್ ಲಸಿಕೆಗೆ ಸೇವಾ ಶುಲ್ಕವನ್ನು ರೂ.100ರಿಂದ 200ಕ್ಕೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ? ರಾಜ್ಯದ ಜನರದ್ದೋ? ಖಾಸಗಿ ಆಸ್ಪತ್ರೆಗಳದ್ದೋ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಸಂಸ್ಥೆಗಳು ನೀಡುವ ಲಸಿಕೆಗೆ ₹ 100 ಸೇವಾ ಶುಲ್ಕವನ್ನು ನಿಗದಿಪಡಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆನ್ನುವ ದೂರುಗಳಿವೆ. ಹೀಗಿರುವಾಗಲೇ ಸರ್ಕಾರ ಸೇವಾ ಶುಲ್ಕವನ್ನು ದುಪ್ಪಟ್ಟುಗೊಳಿಸಿ ಸುಲಿಗೆಯನ್ನು ಬೆಂಬಲಿಸಿದೆ ಎಂದು ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಲಸಿಕಾ ತಯಾರಕ ಸಂಸ್ಥೆ ನಿಗದಿಪಡಿಸಿದ ದರದ ಜೊತೆಗೆ ರೂ.100 ಸೇವಾಶುಲ್ಕ ಮಾತ್ರ ವಸೂಲಿ ಮಾಡಬೇಕೆಂದು ಕೇಂದ್ರ ಸರ್ಕಾರದ ಸುತ್ತೋಲೆ ಇದ್ದರೂ ಲಸಿಕೆಯನ್ನು 900ರೂ.ಗೆ ಮಾರಾಟ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಯಾಕಿಲ್ಲ ಚಿತ್ರ ಸಹಿತ ಟ್ವೀಟ್ ಮಾಡಿ ಪ್ರಶ್ಮಿಸಿದ್ದಾರೆ.
ಇದೇವೇಳೆ, ರಾಜ್ಯದ ಜನತೆಗೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಕೊರೊನಾ ಲಸಿಕೆ ಸಿಗುವಂತೆ ಮಾಡಬೇಕಾಗಿರುವ ಆರೋಗ್ಯ ಸಚಿವ
ಸುಧಾಕರ ಅವರು ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಇವರು ಸಚಿವರೋ? ಖಾಸಗಿ ಆಸ್ಪತ್ರೆಗಳ ಪ್ರಚಾರಕರೋ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.