ADVERTISEMENT

ಮಾಧ್ಯಮಕ್ಕೆ ಸಕಾರಣ ನಿರ್ಬಂಧ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
<div class="paragraphs"><p>ಸಿದ್ದರಾಮಯ್ಯ, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ, ಮುಖ್ಯಮಂತ್ರಿ

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ನಾನೇ ಆದೇಶ ಮಾಡಿಸಿದ್ದೇನೆ. ಈಗ ಮಾಡಿರುವುದು ಸಕಾರಣ ನಿರ್ಬಂಧವೇ ವಿನಾ ಸಂಪೂರ್ಣ ನಿರ್ಬಂಧವಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರುವುದನ್ನು ತೆರವು ಮಾಡುವಂತೆ ಮನವಿ ಸಲ್ಲಿಸಿದ ಪತ್ರಕರ್ತರಿಗೆ ಸಿದ್ದರಾಮಯ್ಯ ಅವರು ಹೀಗೆ ಸ್ಪಷ್ಟನೆ ನೀಡಿದರು.

‘ಸ್ವಾತಂತ್ರ್ಯ ಸ್ವೇಚ್ಚೆ ಆಗಬಾರದು, ಕಂಡ ಕಂಡಲ್ಲಿ ಬಂದು ತೊಂದರೆ ಕೊಡುತ್ತಾ ಇದ್ದೀರಿ. ನಾವು ಕರೆದಾಗ ಬನ್ನಿ ಸಾಕು. ವಿಧಾನಸೌಧಕ್ಕೆ ಬರುವುದು ಬೇಡ ಎಂದು ನಾನು ಹೇಳುವುದಿಲ್ಲ. ಗಾಂಧಿ ಪ್ರತಿಮೆ ಬಳಿ ಚಳವಳಿ ಮಾಡಿದ್ದೀರಿ, ಮಾಡಿ. ಆದರೆ , ಆದೇಶ ಹಿಂದೆ ಪಡೆಯುವುದಿಲ್ಲ. ನಿಮ್ಮ ಮನವಿ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

ಪ್ರತಿಭಟನೆ: ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರದ ನಿರ್ಧಾರ ವಿರೋಧಿಸಿ ಪತ್ರಕರ್ತರು ಗಾಂಧಿ ಪ್ರತಿಮೆ ಎದುರು ಶುಕ್ರವಾರ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ವಿಧಾನಸೌಧದ 313, 334 ಕೊಠಡಿ ಸೇರಿ ಕಾರಿಡಾರ್‌ಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಓಡಾಡುವುದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಸೇರಿ ಗಣ್ಯರು ಹಾಗೂ ಶಾಸಕರ ಭದ್ರತೆಗೆ ತೊಂದರೆಯಾಗುತ್ತದೆ. ಆದ್ದರಿಂದ, ಮಾಧ್ಯಮ ಪ್ರತಿನಿಧಿಗಳು ಕೆಂಗಲ್‌ ಗೇಟ್‌ ಬಳಿ ಮಾತ್ರ ಹೇಳಿಕೆಗಳನ್ನು ಪಡೆಯುವಂತೆ ನಿರ್ಬಂಧ ವಿಧಿಸಬೇಕು ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಪ್ರಸ್ತಾವ ಸಲ್ಲಿಸಿದ್ದರು. ಅದನ್ನು ಉಲ್ಲೇಖಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿರ್ಬಂಧದ ಆದೇಶ ಹೊರಡಿಸಿತ್ತು. 

ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.