ADVERTISEMENT

‘ಮೋದಿ ಕಾರ್ಯವೈಖರಿಗೆ ಉಪಚುನಾವಣೆ ಕನ್ನಡಿ’

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 20:00 IST
Last Updated 31 ಅಕ್ಟೋಬರ್ 2018, 20:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಳ್ಳಾರಿ: ‘ನರೇಂದ್ರ ಮೋದಿ ದೇಶ ಕಂಡ ವಚನಭ್ರಷ್ಟ ರಾಜಕಾರಣಿ. ರಾಜ್ಯದ ಉಪ ಚುನಾವಣೆಗಳು ಅವರ ಕಾರ್ಯವೈಖರಿಯ ವಿರುದ್ಧ ಜನಾಭಿಪ್ರಾಯವನ್ನು ದಾಖಲಿಸುವುದು ಖಚಿತ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ದೇಶಕ್ಕೆ ಅಚ್ಛೇ ದಿನ್ ಬರಲಿಲ್ಲ. ದಿನಬಳಕೆ ವಸ್ತುಗಳ ಬೆಲೆ ಇಳಿಯಲಿಲ್ಲ. ಉದ್ಯಮಿಗಳು ಕೋಟ್ಯಂತರ ರೂಪಾಯಿ ವಂಚಿಸಿ ಮೋದಿ ಮುಂದೆಯೇ ದೇಶ ಬಿಟ್ಟರು. ಇಂಥ ಆಡಳಿತಕ್ಕೆ ರಾಜ್ಯದಲ್ಲೂ ಜನ ಸರಿಯಾದ ಪಾಠ ಕಲಿಸಲಿದ್ದಾರೆ. ಅವರು ಪ್ರಧಾನಿಯಾದ ನಾಲ್ಕೂವರೆ ವರ್ಷಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಗಳು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಗೆ ಬಲ ತಂದುಕೊಡುತ್ತವೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ರಮ ಗಣಿಗಾರಿಕೆ ಮಾಡದೇ ಇದ್ದರೆ ಜಿ. ಜನಾರ್ದನ ರೆಡ್ಡಿ ಜೈಲಿಗೆ ಏಕೆ ಹೋದರು? ಸಾಕ್ಷಿ ಪುರಾವೆಯಿಲ್ಲದೆ ಯಾವ ನ್ಯಾಯಾಧೀಶರೂ ಅಮಾಯಕರನ್ನು ಜೈಲಿಗೆ ಕಳಿಸಲ್ಲ’ ಎಂದು ಅವರು ಹೇಳಿದರು

ADVERTISEMENT

‘ರೆಡ್ಡಿಯವರನ್ನು ಪಕ್ಷವೇ ದೂರವಿಟ್ಟಿದೆ. ಆದರೆ, ಅವರೇ ಅದರ ಮೈಮೇಲೆ ಬೀಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಮಲಗಿದ ಕೂಡಲೇ ಮುಖ್ಯಮಂತ್ರಿ ಕೊಠಡಿ ಕಾಣಿಸುತ್ತದೆ. ಅವರು ಹೇಳಿದ ಮಾತ್ರಕ್ಕೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.