ADVERTISEMENT

ದಲಿತ ಶಾಸಕನ ಪರ ನಿಲ್ಲದ ಸಿದ್ದರಾಮಯ್ಯ ನಿಜವಾದ ಅಸಮರ್ಥ ನಾಯಕ: ಬಿಜೆಪಿ ವಾಗ್ದಾಳಿ

ಏಜೆನ್ಸೀಸ್
Published 8 ಏಪ್ರಿಲ್ 2021, 9:19 IST
Last Updated 8 ಏಪ್ರಿಲ್ 2021, 9:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತದ ಸಿದ್ದರಾಮಯ್ಯ ನಿಜವಾದ ಅಸಮರ್ಥ ನಾಯಕ ಎಂದು ಬಿಜೆಪಿ ಹರಿಹಾಯ್ದಿದೆ.

ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, 'ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕ ಅಖಂಡ ಅವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲಾಗದ ನೀವು ನಿಜವಾದ ಅಸಮರ್ಥ ನಾಯಕ. ನಿಮ್ಮ ಅಸಮರ್ಥತೆಯನ್ನು ಮುಚ್ಚಿಟ್ಟುಕೊಂಡು ಬೇರೆಯವರ ಸಮರ್ಥತೆಯ ಬಗ್ಗೆ ಪ್ರಶ್ನಿಸುವುದು ನಿಮಗೆ ಶೋಭೆ ತರುವುದಿಲ್ಲ' ಎಂದು ವಾಗ್ದಾಳಿ ನಡೆಸಿದೆ.

'ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ದು ನಿಮ್ಮ ಅಸಮರ್ಥತೆಯಿಂದಲ್ಲವೇ? ಬಾದಾಮಿಯಲ್ಲಿ ಮುಂದಿನ ಬಾರಿ ಸೋಲುವ ಭಯದಿಂದ ಮೂರನೇ ಕ್ಷೇತ್ರದ ಹುಡುಕಾಟದಲ್ಲಿರುವುದು ನಿಮ್ಮ ಅಸಮರ್ಥತೆಯಲ್ಲವೇ? ಸಮರ್ಥ & ಅಸಮರ್ಥ ಎನ್ನುವ ಹೋರಾಟ ಇರುವುದು ಮತ್ತು ನಿಮ್ಮ ನಡುವೆಯೇ ಹೊರತು ಬಿಜೆಪಿಯಲ್ಲಲ್ಲ' ಎಂದು ಬಿಜೆಪಿ ಹೇಳಿದೆ.

ADVERTISEMENT

'ವಿಧಾನಸೌಧ - ವಿಕಾಸ ಸೌಧದ ಮಧ್ಯೆ ಸರ್ಕಾರ ನಿದ್ದೆ ಹೊಡೆಯುತ್ತಿದೆ ಎಂದು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ತಿವಿದಿದ್ದರು. ಈ ಹೇಳಿಕೆಯನ್ನು ಸಿದ್ದರಾಮಯ್ಯ ಮರೆತಿರಬಹುದು, ಆದರೆ ರಾಜ್ಯದ ಜನತೆ ಮರೆತಿಲ್ಲ. ನಿಮ್ಮ ಅಸಮರ್ಥತೆಯನ್ನು ಸಾರ್ವಜನಿಕ ವೇದಿಕೆಯಲ್ಲೇ ಸ್ಪೀಕರ್‌ ತೆರೆದಿಟ್ಟಿದ್ದರು' ಎಂದು ಕೇಸರಿ ಪಕ್ಷವು ಸಿದ್ದರಾಮಯ್ಯನವರನ್ನು ಟೀಕಿಸಿದೆ.

'ಪರಮೇಶ್ವರ್ ಗೆದ್ದರೆ ತಾನು ಸಿಎಂ ಆಗುವ ಕನಸಿಗೆ ಕುತ್ತು ಬರುತ್ತದೆ ಎಂದು ಬಲಪ್ರಯೋಗಿಸಿ ಅವರನ್ನು ಸೋಲಿಸಿದಿರಿ. ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಮೂಕ ಪ್ರೇಕ್ಷಕನನ್ನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು' ಎಂದು ಬಿಜೆಪಿ ಹೇಳಿದೆ.

'ನೀವು ಮುಖ್ಯಮಂತ್ರಿ ಆಗಿದ್ದಾಗ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತಮ್ಮನ್ನು ಹೋದಲ್ಲಿ ಬಂದಲ್ಲಿ ಟೀಕೆ ಮಾಡುತ್ತಿದ್ದರು. ಅವರನ್ನು ನಿಯಂತ್ರಿಸಲಾಗದ ನೀವು ಈಗ ಬಿಜೆಪಿ ಪಕ್ಷದ ಬಗ್ಗೆ ಚಿಂತಿಸುವುದು ಹಾಸ್ಯದ ವಿಚಾರ. ಕಾಂಗ್ರೆಸ್‌ ಪಕ್ಷದಲ್ಲಿ ನೀವೊಬ್ಬ ವಲಸೆ ನಾಯಕ ಸಿದ್ದರಾಮಯ್ಯ ಅಷ್ಟೇ' ಎಂದು ಬಿಜೆಪಿ ವ್ಯಂಗ್ಯವಾಡಿದೆ.

'ತಮ್ಮದೇ ಪಕ್ಷದ ಶಾಸಕ ಹಾಗೂ ಮಂತ್ರಿಗಳನ್ನು ಹತೋಟೆಯಲ್ಲಿ ಇಟ್ಟುಕೊಳ್ಳದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಸಮರ್ಥ ನಾಯಕ' ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.