ಬಾಗಲಕೋಟೆ: ’ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆಗಿರುವುದರಿಂದ ಹೆಚ್ಚು ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ ಪದೇ ಪದೇ ಕ್ಷೇತ್ರಕ್ಕೆ ಬರಲು ಆಗುತ್ತಿಲ್ಲ‘ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ಪಟ್ಟಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
’ನಾನು ಮುಖ್ಯಮಂತ್ರಿ ಆಗಿದ್ದಾಗ, ಏನಾದರೂ ಬಾದಾಮಿ ಶಾಸಕ ನಾನು ಆಗಿದ್ದರೆ ನಿಮಗೆ ಬೇಕಾದ ಎಲ್ಲ ಅಭಿವೃದ್ಧಿ, ವಿಕಾಸ ಮಾಡುತ್ತಿದ್ದೆ. ಇರಲಿ ಆದರೂ ನಿಮ್ಮ ಆಶೀವಾ೯ದ ನಮ್ಮ ಮೇಲಿರಲಿ‘ ಎಂದು ಮನವಿ ಮಾಡಿದರು.
ಚಾಮುಂಡೇಶ್ವರಿ ಜನ ನನ್ನನ್ನು ಕಳೆದ ಬಾರಿ ಸೋಲಿಸಿದರು. ಅಲ್ಲಿ ಐದು ಬಾರಿ ಗೆದ್ದಿದ್ದೆನು. ನನ್ನ ಊರು, ತಾಲ್ಲೂಕು ಇರೋ ಕ್ಷೇತ್ರ ಅದು. ಅಲ್ಲಿಯೇ ನನ್ನ ಸೋಲಿಸಿ ಬಿಟ್ರು. ಬಾದಾಮಿ ಜನ ಒಳ್ಳೆಯ ಜನ ಅಂತ ಇಲ್ಲಿ ನಿಂತುಕೊಂಡೆ, ನೀವು ನನ್ನನ್ನು ಗೆಲ್ಲಿಸಿದ್ರಿ. ನಿಮ್ಮ ಋಣ ತೀರಿಸಬೇಕಲ್ಲ' ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಕಹಿಯನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.
ಭಾಷಣ ಮಧ್ಯೆಯೇ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.