ಬೆಂಗಳೂರು: ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ ಏಪ್ರಿಲ್ 14ರಿಂದ 20ರವರೆಗೆ ರಾಜ್ಯ ಮಟ್ಟದ ಆರನೇ ವರ್ಷದ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠದ ಧರ್ಮದರ್ಶಿ ಶಾಮಾನಂದ ಬಾ.ಪೂಜೇರಿ ‘ಸ್ಪರ್ಧೆಯಲ್ಲಿ ಗೆದ್ದ ತಂಡಕ್ಕೆ ₹90 ಸಾವಿರ ಬಹುಮಾನ ನೀಡಲಾಗುತ್ತದೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ ₹70 ಹಾಗೂ ₹60 ಸಾವಿರ ಸಿಗಲಿದೆ. ಉತ್ತಮ ಸಾಮರ್ಥ್ಯ ತೋರಿದ ಹತ್ತು ತಂಡಗಳನ್ನು ಆಯ್ಕೆಮಾಡಿ ಆ ತಂಡಗಳಿಗೆ ತಲಾ ₹8 ಸಾವಿರ ಸಮಾಧಾನಕರ ಬಹುಮಾನ ಕೊಡಲಾಗುತ್ತದೆ. 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡಗಳಿಗೆ ತಲಾ ₹9 ಸಾವಿರ ಹಾಗೂ ಉತ್ತಮ ಪ್ರದರ್ಶನ ನೀಡುವ ಮಹಿಳಾ ತಂಡವೊಂದಕ್ಕೆ ₹9 ಸಾವಿರ ಬಹುಮಾನ ನೀಡಲಾಗುತ್ತದೆ’ ಎಂದರು.
‘ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ತಂಡವೂ ಮೂರು ಪದಗಳನ್ನು ಒಟ್ಟು 18 ನಿಮಿಷಗಳಲ್ಲಿ ಹಾಡಬೇಕು. ಇದರಲ್ಲಿ ಕೈವಲ್ಯ ಸಾಹಿತ್ಯದ ಕುರಿತಾದ ಎರಡು ಪದ್ಯಗಳು ಇರುವುದು ಕಡ್ಡಾಯ. ಉತ್ತಮ ಹಾಡುಗಾರರು, ಹಾರ್ಮೋನಿಯಂ, ತಬಲಾ, ತಾಳ ಹಾಗೂ ಧಮಡಿ ವಾದಕರಿಗೆ ವಿಶೇಷ ಬಹುಮಾನಗಳು ಇರಲಿವೆ. ಆಸಕ್ತ ತಂಡಗಳು ಏಪ್ರಿಲ್ 10ರೊಳಗೆ ಹೆಸರು ನೋಂದಾಯಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೂ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತದೆ. ಪ್ರಯಾಣ ಭತ್ಯೆಯನ್ನೂ ನಾವೇ ನೀಡುತ್ತೇವೆ’ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ 9620693060.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.