ADVERTISEMENT

ಕಾಂಗ್ರೆಸ್ ನಾಯಕರ ಟೀಕೆಗೆ ಫಲಿತಾಂಶವೇ ಉತ್ತರ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 9:17 IST
Last Updated 2 ನವೆಂಬರ್ 2021, 9:17 IST
ಎಚ್.‌ಡಿ.ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)
ಎಚ್.‌ಡಿ.ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)   

ರಾಮನಗರ: ಜೆಡಿಎಸ್‌ ಪಕ್ಷವು ಬಿಜೆಪಿಯ ‘ಬಿ ಟೀಮ್‌’ ಎಂದು ಕಾಂಗ್ರೆಸ್‌ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.‌ಡಿ.ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸ್ಫರ್ಧೆ ಮಾಡಿತ್ತು ಎಂದು ಹೇಳಿದ್ದ ಕಾಂಗ್ರೆಸ್‌ಗೆ ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ಸಿಕ್ಕಿರುವ ಮತಗಳೇ ಉತ್ತರ ನೀಡಿವೆ’ ಎಂದರು.

ಸ್ಥಳೀಯ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ನಿಲ್ಲಿಸಲಾಯಿತು. ಕಾಂಗ್ರೆಸ್-ಬಿಜೆಪಿ ಹೇಳಿರುವಂತೆ ನಾನು ಉಪ ಚುನಾವಣೆ ಫಲಿತಾಂಶಕ್ಕೆ ಮಹತ್ವ ನೀಡುವುದಿಲ್ಲ. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು.

ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ನಮ್ಮ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಪ್ರಚಾರದ ವೇಳೆ ನಾನು ಐವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಜನರ ಸ್ಪಂದನೆ ಉತ್ತಮವಾಗಿತ್ತು. ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನೀಡಿದ್ದ ನೀರಾವರಿ ಯೋಜನೆಗಳ ಬಗ್ಗೆ, ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಕಾರ್ಯಕ್ರಮಗಳು ಹಾಗೂ ಸಾಲ ಮನ್ನಾ ಬಗ್ಗೆ ಪ್ರತಿ ಹಳ್ಳಿಯಲ್ಲೂ ಜನ ಮಾತನಾಡಿದ್ದರು. ಸ್ವತಃ ಜನರೇ ನನ್ನ ಬಳಿಗೆ ಬಂದು ಈ ಬಗ್ಗೆ ಮಾತನಾಡುತ್ತಿದ್ದರು. ಆದರೂ ಈ ರೀತಿಯ ಫಲಿತಾಂಶ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮನಗೂಳಿ ಮಗನ ಹೈಜಾಕ್:‌ ಮಾಜಿ ಸಚಿವ ಎಂ.ಸಿ.ಮನಗೂಳಿ ಮರಣದ ನಂತರ ಅವರ ಪುತ್ರ ಅಶೋಕ್‌ ಮನಗೂಳಿ ಅವರನ್ನು ಕಾಂಗ್ರೆಸ್‌ ಹೈಜಾಕ್‌ ಮಾಡಿತು. ಜತೆಗೆ, ನಮ್ಮ ಸಂಘಟನೆಯನ್ನೂ ದುರ್ಬಲ ಮಾಡಲಾಗಿತ್ತು. ಇದು ನನ್ನ ಗಮನದಲ್ಲಿತ್ತು. ಮತಗಟ್ಟೆಗಳಲ್ಲಿ ಕಾರ್ಯಕರ್ತರನ್ನು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಈ ಕಾರಣಕ್ಕೆ ನಮಗೆ ಹಿನ್ನಡೆ ಉಂಟಾಯಿತು. ಆದರೂ ಈ ಫಲಿತಾಂಶದಿಂದ ನಾನು ಅಧೀರನೂ ಆಗಿಲ್ಲ, ನನಗೆ ಆತಂಕವೂ ಇಲ್ಲ ಎಂದು ಅವರು ಹೇಳಿದರು.

ಹಾನಗಲ್‌ನಲ್ಲಿ ನಮಗೆ ನೆಲೆ ಇರಲಿಲ್ಲ. ಆದರೆ, ಸಿಂದಗಿಯಲ್ಲಿ ನಮ್ಮವರೇ ಶಾಸಕರಿದ್ದರು. ಯಾವ ಚುನಾವಣೆಯಲ್ಲೂ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇರುತ್ತಿತ್ತು ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತೆ ಉಪ ಚುನಾವಣೆಗಳು ನಡೆಯುವ ಬಗೆಯೇ ಬೇರೆ, ಸಾರ್ವತ್ರಿಕ ಚುನಾವಣೆಗಳು ನಡೆಯುವ ರೀತಿಯೇ ಬೇರೆ ಎಂದ ಅವರು, ನಮ್ಮ ಪಕ್ಷ 2023ನೇ ವಿಧಾನಸಭೆ ಚುನಾವಣೆ ಮೇಲೆ ಪೂರ್ಣ ಗಮನ ಕೇಂದ್ರೀಕರಿಸಿದೆ. ಅದಕ್ಕೆ ಬಿಡದಿಯಲ್ಲಿ ಸಂಘಟನಾ ಕಾರ್ಯಗಾರವನ್ನೂ ನಡೆಸಲಾಯಿತು. ಈಗ ಪಕ್ಷದ ಸಂಘಟನೆಯತ್ತಲೇ ನಾವು ಗಮನ ಇರಿಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಹಣದಿಂದಲೇ ಚುನಾವಣೆ ನಡೆದಿದೆ:ಉಪ ಚುನಾವಣೆಗಳು ನಡೆಯುವುದು ಹಣಬಲದಿಂದಲೇ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಸಿಂದಗಿಯಲ್ಲಿ ಕೊನೆ ಆಟ ಎಂದಿದ್ದ ಸಚಿವರೊಬ್ಬರ ಹೇಳಿಕೆಯನ್ನು ಮಾಧ್ಯಮಗಳೇ ವರದಿ ಮಾಡಿವೆ. ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ ಎನ್ನುವುದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿವೆ. ಬಿಜೆಪಿ- ಕಾಂಗ್ರೆಸ್‌ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಇದೇ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳ ಕಥೆ ಏನೂ ಎನ್ನುವುದು ತಿಳಿದ ವಿಷಯವೇ ಎಂದು ಕುಮಾರಸ್ವಾಮಿ ತಿಳಿಸಿದರು.‌

ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಾರೆ ಎಂದು ಅವರು ಹೇಳಿದರು.

8ರಿಂದ ಜಿಲ್ಲಾವಾರು ಸಭೆ:

ಇದೇ ನವೆಂಬರ್‌ 8ರಿಂದ 16ರವರೆಗೆ ಪಕ್ಷದ ಕಚೇರಿಯಲ್ಲಿ ಪ್ರತಿ ಜಿಲ್ಲಾವಾರು ಸಭೆಗಳನ್ನು ಕರೆಯಲಾಗಿದೆ. ಪ್ರತಿದಿನ ನಾಲ್ಕು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದೇನೆ. ಪದಾಧಿಕಾರಿಗಳು ಹಾಗೂ ಸಂಭವನೀಯ ಅಭ್ಯರ್ಥಿಗಳು ಈ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟುವುದು ಹಾಗೂ ವಿಷಯಾಧಾರಿತವಾಗಿ ಹೋರಾಟ ನಡೆಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ 2023ಕ್ಕೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.