ವಿಜಯಪುರ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿಯ ಶ್ರೀರಾಮಸೇನೆಯ ಕಾರ್ಯಕರ್ತ ಸುನೀಲ ಅಗಸರನನ್ನು ಎಸ್ಐಟಿ ಪೊಲೀಸರು, ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೊಳಪಡಿಸಿದರು ಎಂಬುದು ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆ, ಸುನೀಲ ಅಗಸರ ಸ್ನೇಹಿತರು. ಈ ಹಿಂದೆ, ಎಸ್ಐಟಿ ಪೊಲೀಸರು ಸತತ ಐದು ದಿನ ಸುನೀಲನನ್ನು ವಿಚಾರಣೆಗೊಳಪಡಿಸಿದ್ದರು.
‘ಬೆಳಿಗ್ಗೆಯೇ ಸಿಂದಗಿಯಲ್ಲಿರುವ ಸುನೀಲ ಮನೆಗೆ ಬಂದಿದ್ದ ಅಧಿಕಾರಿಗಳ ತಂಡ, ಆತನನ್ನು ವಿಚಾರಣೆಗೆ ವಿಜಯಪುರಕ್ಕೆ ಕರೆದುಕೊಂಡು ಹೊರಟಿತು. ಈ ಸಂದರ್ಭ ಮಗನ ಜತೆ, ಸುನೀಲ ತಂದೆ ಮಡಿವಾಳಪ್ಪ ಅಗಸರ ಸಹ ಹೋದರು. ಸುದೀರ್ಘ ವಿಚಾರಣೆ ಬಳಿಕ ತಂದೆ–ಮಗ ರಾತ್ರಿ 7.45ರ ವೇಳೆಗೆ ಮನೆಗೆ ಮರಳಿದ್ದಾರೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಾಧ್ಯಮದವರಿಗೆ ಯಾವುದೇ ಹೇಳಿಕೆ ನೀಡಬಾರದು’ ಎಂದು ಎಸ್ಐಟಿ ಅಧಿಕಾರಿಗಳ ತಂಡ, ಸುನೀಲಗೆ ಖಡಕ್ ಎಚ್ಚರಿಕೆ ನೀಡಿದ್ದರಿಂದ ತನ್ನ ಸೋದರ ಮಾವನ ಜತೆ, ಅಗಸರ ಅಜ್ಞಾತ ಸ್ಥಳಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.