ಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳದ ಬೆಳವಣಿಗೆ ಸಂಬಂಧಿಸಿ ಆರೋಪದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಕೇರಳದ ಯೂಟ್ಯೂಬರ್ ಸೇರಿದಂತೆ ಹಲವರನ್ನು ಬೆಳ್ತಂಗಡಿಯ ಕಚೇರಿಗೆ ಕರೆಸಿಕೊಂಡು ಸೋಮವಾರ ವಿಚಾರಣೆಗೆ ಒಳಪಡಿಸಿದರು.
ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ., ಸಾಕ್ಷಿ ದೂರುದಾರ ಎಸ್ಐಟಿಗೆ ತಂದೊಪ್ಪಿಸಿದ್ದ ಬುರುಡೆ ಇದ್ದ ಜಾಗವನ್ನು ತೋರಿಸಿದ್ದ ವಿಠಲ ಗೌಡ, ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಿಂದ ಬುರುಡೆ ಹೊರ ತೆಗೆದ ವಿಡಿಯೊ ಪ್ರಸಾರ ಮಾಡಿದ್ದ ಕೇರಳದ ಯೂಟ್ಯೂಬರ್ ಮುನಾಫ್ ಹಾಗೂ ಕರ್ನಾಟಕದ ‘ಯುನೈಟೆಡ್ ಮಿಡಿಯಾ’ ಯೂಟ್ಯೂಬ್ ಚಾನೆಲ್ನ ಅಭಿಷೇಕ್ ಹಾಗೂ ಗಿರೀಶ ಮಟ್ಟೆಣ್ಣವರ ಸೋಮವಾರ ವಿಚಾರಣೆಗೆ ಹಾಜರಾದರು.
ಎಸ್ಐಟಿ ಕಚೇರಿಗೆ ತೆರಳುವ ಮುನ್ನ ಮಾಧ್ಯಮದವರ ಜೊತೆಗೆ ಮಾತನಾಡಿದ ಮುನಾಫ್, ‘ಎಸ್ಐಟಿಯವರು ಏತಕ್ಕಾಗಿ ನನ್ನನ್ನು ವಿಚಾರಣೆ ನಡೆಸುತ್ತಿ ದ್ದಾರೆ ಎಂಬುದು ಖಚಿತವಾಗಿ ಗೊತ್ತಿಲ್ಲ. ನನ್ನ ಬಳಿ ಇರುವ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳುತ್ತೇನೆ’ ಎಂದರು.
ಸಾಕ್ಷಿ ದೂರುದಾರ ತಂದೊಪ್ಪಿಸಿದ್ದ ತಲೆಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲಿರುವ ಬಂಗ್ಲಗುಡ್ಡೆಯ ಕಾಡಿನಿಂದ ಹೊರತೆಗೆದ ಜಾಗದಲ್ಲಿ ಪೊಲೀಸ್ ಕಾವಲನ್ನು ಮುಂದುವರಿಸಲಾಗಿದೆ.
ವಸಂತ ಗಿಳಿಯಾರ್ ವಿರುದ್ಧ ಎಫ್ಐಆರ್:
ದ್ವೇಷ ಹುಟ್ಟಿಸುವ ಸುದ್ದಿ ಹಂಚಿಕೊಂಡಿದ್ದ ಆರೋಪದ ಮೇಲೆ ವಸಂತ ಗಿಳಿಯಾರ್ ಫೇಸ್ಬುಕ್ ಖಾತೆ ಹಾಗೂ ಶ್ರೀಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ’ ಎಂಬ ಫೇಸ್ ಬುಕ್ ಖಾತೆ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಒಡನಾಡಿಗೆ ಗುಪ್ತಚರ ತಂಡ ಭೇಟಿ
ಮೈಸೂರು: ರಾಜ್ಯ ಗುಪ್ತದಳದ ಇಬ್ಬರು ಅಧಿಕಾರಿಗಳು ಇಲ್ಲಿನ ಒಡನಾಡಿ ಸೇವಾ ಸಂಸ್ಥೆಗೆ ಶನಿವಾರ ಭೇಟಿ ನೀಡಿ, ಮೂರು ವರ್ಷದ ಹಣಕಾಸು ವಹಿವಾಟಿನ ವರದಿ ವಿವರಗಳನ್ನು ಸಂಗ್ರಹಿಸಿದರು.
‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದ ಮಹಿಳೆಯ ಬಗ್ಗೆ ಅಧಿಕಾರಿಗಳು ವಿಚಾರಿಸಿದರು. ಮಾಹಿತಿ ನೀಡಿದ್ದೇವೆ’ ಎಂದು ಸಂಸ್ಥೆ ನಿರ್ದೇಶಕ ಎಂ.ಎಲ್.ಪರಶುರಾಮ್ 'ಪ್ರಜಾವಾಣಿ'ಗೆ ತಿಳಿಸಿದರು.
‘ಸಂಸ್ಥೆಯ ವ್ಯವಹಾರಗಳು ಪಾರದರ್ಶಕವಾಗಿವೆ. ಯಾವುದೇ ತನಿಖೆ ಸ್ವಾಗತಿಸುತ್ತೇವೆ. ವಿದೇಶದಿಂದ ಹಣ ಬರುತ್ತಿರುವುದು ಸತ್ಯ. ಸರ್ಕಾರದ ನಿಯಮಗಳನ್ನು ಅನುಸರಿಸಿಯೇ ಪಡೆಯುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.