ದಾವಣಗೆರೆ: ರಾಜ್ಯದಾದ್ಯಂತ ಜಾನುವಾರುಗಳಲ್ಲಿಚರ್ಮಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ಕಾಣಿಸಿಕೊಂಡಿದ್ದು, ಲಸಿಕೆ ಕಂಡು ಹಿಡಿದಿದ್ದರೂ ಪಶು ಆಸ್ಪತ್ರೆಗಳಿಗೆ ಬರಲು ಇನ್ನೂ 6ರಿಂದ 7 ತಿಂಗಳು ಬೇಕಾಗಲಿದೆ. ಇದರಿಂದ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆಗೆ ಒಳಗಾಗುವ ಆತಂಕ ಎದುರಾಗಿದೆ.
ಎರಡು ತಿಂಗಳಿಂದದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ. ರಾಜ್ಯದ ಬೆಂಗಳೂರು ಗ್ರಾಮಾಂತರ, ಹಾವೇರಿ, ದಾವಣಗೆರೆ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೋಗ ಉಲ್ಬಣಿಸಿದೆ. ರಾಜ್ಯದಲ್ಲಿ 3800ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಇದು ಕಾಣಿಸಿಕೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ 90ಕ್ಕೂ ಹೆಚ್ಚು ಜಾನುವಾರು ರೋಗಬಾಧೆಗೆ ಒಳಗಾಗಿವೆ.
ಒಂದು ಹಸುವಿನಲ್ಲಿ ರೋಗ ಕಾಣಿಸಿಕೊಂಡ ಕೂಡಲೇ ಇತರ ಜಾನುವಾರಿಗೂ ತಕ್ಷಣ ಹರಡುತ್ತದೆ. ಕೆಲ ರೈತರು ಇದನ್ನು ಬೇಗ ಗುರುತಿಸುತ್ತಾರೆ. ಕೆಲವರು ಗುರುತಿಸದ ಕಾರಣ ಹೆಚ್ಚಿನ ಜಾನುವಾರು ರೋಗಕ್ಕೆ ತುತ್ತಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು.
ಈ ರೋಗಕ್ಕೆಸದ್ಯ ನಿರ್ದಿಷ್ಟ ಲಸಿಕೆ ಇಲ್ಲ.ಕಳೆದ ತಿಂಗಳು ಚರ್ಮಗಂಟು ರೋಗಕ್ಕೆ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)ನಿಂದ ಲಂಪಿ ಸ್ಕಿನ್ ಡಿಸೀಸ್ ನಿರೋಧಕ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ, ಅದು ರಾಜ್ಯಕ್ಕೆ ಬರಲು ಇನ್ನೂ 6ರಿಂದ 7 ತಿಂಗಳ ಸಮಯ ಹಿಡಿಯಬಹುದು. ಕಂಪನಿಗೆ ಗುತ್ತಿಗೆ ನೀಡಿ ಅವರು ಲಸಿಕೆ ತಯಾರಿಕೆ ಆರಂಭಿಸಲು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.