ADVERTISEMENT

‘ಸಿ.ಎಂ ಪರಿಹಾರ ನಿಧಿ’ ವಿತರಣೆಗೆ ತಂತ್ರಾಂಶ

11,530 ಪ್ರಕರಣಗಳಿಗೆ ₹ 61.88 ಕೋಟಿ ಪರಿಹಾರ ಬಿಡುಗಡೆ– ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:12 IST
Last Updated 16 ಸೆಪ್ಟೆಂಬರ್ 2020, 19:12 IST

ಬೆಂಗಳೂರು: ‘ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಯಡಿ ಪರಿಹಾರ ಕೋರಿ 14,275 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ, 11,530 ಪ್ರಕರಣಗಳಿಗೆ ಸಂಬಂಧಿಸಿದಂತೆ ₹ 61.88 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಯ ಕಾರ್ಯವಿಧಾನಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ತಂತ್ರಾಂಶಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಈ ವ್ಯವಸ್ಥೆಯಿಂದ ಬಡ ಅರ್ಜಿದಾರರನ್ನು ಮಧ್ಯವರ್ತಿಗಳು ಶೋಷಿಸುವುದು ಮತ್ತು ನಕಲಿ ಫಲಾನುಭವಿಗಳ ಹಾವಳಿ ತಪ್ಪಿಸಬಹುದು. ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವ ವೇಳೆ ಆಗಬಹುದಾದ ವಿಳಂಬವನ್ನೂ ತಡೆಯಬಹುದು’ ಎಂದರು.

‘ಈವರೆಗೆ 587 ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಗಳಿಗೆ ₹ 9.16 ಕೋಟಿ ಮೊತ್ತದ ಭರವಸೆ ಪತ್ರ
ಗಳನ್ನು ವಿತರಿಸಲಾಗಿದೆ. ಒಟ್ಟು 12,117 ಪ್ರಕರಣಗಳಿಗೆ ₹ 71.04 ಕೋಟಿ ಪರಿಹಾರ ನೀಡಲಾಗಿದೆ. 2020 ಏಪ್ರಿಲ್ ತಿಂಗಳಿನಿಂದ ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಸ್ವೀಕರಿಸಿ, ನೇರ ನಗದು ಯೋಜನೆಯ ಮೂಲಕ ಪರಿಹಾರ ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಬಿಪಿಎಲ್‌ ಪಡಿತರ ಚೀಟಿ
ಮತ್ತು ಆಧಾರ್‌ ಮಾನದಂಡವಾಗಿ ಉಪಯೋಗಿಸುತ್ತಿರುವ ಕಾರಣ ಈ ತಂತ್ರಾಂಶದ ನೆರವಿನಿಂದ ವಿಳಂಬವಿಲ್ಲದೆ ಪರಿಹಾರ ಮೊತ್ತ ವಿತರಿಸಬಹುದು. ವಿಧಾನಸಭೆ, ವಿಧಾನಪರಿಷತ್, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕ ಲಾಗಿನ್ ಒದಗಿಸಲಾಗಿದೆ. ಹೀಗಾಗಿ, ಶಾಸಕರ ಕಚೇರಿಗೆ ಅಥವಾ ಸಂಸದರ ಕಚೇರಿಗೆ ತೆರಳಿ ಅರ್ಜಿಗಳನ್ನು ಸಲ್ಲಿಸಬಹುದು ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.