ಮಂಗಳೂರು: ಮೂಡುಬಿದಿರೆಯಡಿವೈಎಫ್ಐ ಮುಖಂಡ ರಿಯಾಜ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನುವ ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ.
‘ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಡಿವೈಎಫ್ಐ ಮುಖಂಡರು ದೂರು ನೀಡಿದ್ದಾರೆ. ಇನ್ನೊಂದೆಡೆ ರಿಯಾಜ್ ಮತ್ತು ಅವರ ಸಹೋದರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವೇಣೂರು ಠಾಣೆ ಪೊಲೀಸರು ಹೇಳುತ್ತಿದ್ದಾರೆ. ಘಟನೆಯ ಕುರಿತು ಸ್ವತಂತ್ರ ವಿಚಾರಣೆ ನಡೆಸಲು ಆದೇಶಿಸಲಾಗಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ವಿಚಾರಣೆ ನಡೆಸಲಿದ್ದು, ವರದಿ ಸಲ್ಲಿಸಿದ ಬಳಿಕ ಅದನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬೇಕರಿ ಬಾಗಿಲು ಮುಚ್ಚಿ ತನ್ನ ಸಹೋದರನೊಂದಿಗೆ ಬೈಕ್ನಲ್ಲಿ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ಐ ಮುಖಂಡ ರಿಯಾಜ್ ಅವರ ಮೇಲೆ ಪೊಲೀಸರು ಮಂಗಳವಾರ ತಡರಾತ್ರಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜತೆಗೆ, ‘ಬ್ಯಾರಿ ನೀನು ಕಳ್ಳತನಕ್ಕೇ ಹೋಗುತ್ತಿದ್ದೀಯಾ, ಉಗ್ರಗಾಮಿ ತರ ಕಾಣುತ್ತೀರಾ’ಎಂದು ನಿಂದಿಸಿದ್ದಾರೆ ಎಂದೂ ಆರೋಪಿಸಲಾಗಿತ್ತು.ಪೊಲೀಸರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:ಡಿವೈಎಫ್ಐ ಮುಖಂಡನ ಮೇಲೆ ಪೊಲೀಸರ ದೌರ್ಜನ್ಯ: ಆರೋಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.