ಬೆಂಗಳೂರು: ಸಾಲ ನೀಡಿದವರ ಕಿರುಕುಳ, ಬೆದರಿಕೆಗೆ ಹೆದರಿ ಸಾವಿಗೆ ಕೊರಳೊಡ್ಡುವವರು, ಊರು ತೊರೆಯುತ್ತಿರವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಸಾಲದ ಅಗಾಧತೆ ಹಾಗೂ ಬಡ್ಡಿಯ ಉರುಳು ಊಹೆಗೂ ನಿಲುಕುತ್ತಿಲ್ಲ. ಸಾಲದ ಹೊರೆಹೊತ್ತವರ ರೋದನವೂ ನಿಲ್ಲುತ್ತಿಲ್ಲ.
ಸರ್ಕಾರದ ಮಾಹಿತಿಯಂತೆ ರಾಜ್ಯದಲ್ಲಿ 31 ನೋಂದಾಯಿತ ಮೈಕ್ರೊ ಫೈನಾನ್ಸ್ ಕಂಪನಿಗಳು ₹1,152.80 ಕೋಟಿ ಸಾಲ ನೀಡಿವೆ. ನೋಂದಣಿರಹಿತ, ಪರವಾನಗಿರಹಿತ 250ಕ್ಕೂ ಸಾಲದಾತರು, 31 ಸಾವಿರಕ್ಕೂ ಹೆಚ್ಚು ಲೇವಾದೇವಿದಾರರು ಹಾಗೂ ಗಿರವಿದಾರರು ಭಾರಿ ಬಡ್ಡಿಯ ದರದಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ‘ಖಾಸಗಿ ಸಾಲ’ದ ‘ಪಾಶ’ದಲ್ಲಿ ಸಿಲುಕಿ ಒದ್ದಾಡುತ್ತಿವೆ.
ತಮ್ಮ ಅಗತ್ಯ, ಅನಿವಾರ್ಯಕ್ಕಾಗಿ ಖಾಸಗಿ ಸಾಲದಾತರ ಬಳಿ ತೆರಳಿ ಕೈಚಾಚಿರುವ ನೂರಾರು ಮಂದಿ, ಪಡೆದ ಸಾಲ ತೀರಿಸಲಾಗದಂತಹ ಸ್ಥಿತಿ ತಲುಪಿದ್ದಾರೆ. ಒಂದು ಸಾಲದ ಬಡ್ಡಿ ಪಾವತಿಸಲು ಮತ್ತೊಂದು ಸಾಲ, ಎರಡು ಸಾಲ ತೀರಿಸಲು ಮತ್ತೊಂದು ಸಾಲದ ಸುಳಿಗೆ ಸಿಲುಕಿರುವ ಬಡವರು ಮತ್ತು ಮಧ್ಯಮವರ್ಗದವರು, ಅದರಿಂದ ಹೊರಬರಲಾಗದೇ ನಲುಗುತ್ತಿದ್ದಾರೆ. ಸುತ್ತಿಕೊಳ್ಳುತ್ತಿರುವ ಸಾಲದ ಸರಮಾಲೆ ಮತ್ತು ಸಾಲದಾತ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ ಎನ್ನುತ್ತವೆ ರಾಜ್ಯದಲ್ಲಿ ವರದಿಯಾಗುತ್ತಿರುವ ಪ್ರಕರಣಗಳು.
ದುಬಾರಿ ಬಡ್ಡಿ ಹಾಗೂ ಬಲವಂತದ ವಸೂಲಿಯನ್ನು ನಿಗ್ರಹಿಸಲು ಸುಗ್ರೀವಾಜ್ಞೆ ತರುವುದಾಗಿ ಸರ್ಕಾರ ಹೇಳುತ್ತಾ ಬಂದಿದ್ದು, ರಾಜ್ಯಪಾಲರ ಅಂಕಿತ ಹಾಕದೇ ಇರುವುದರಿಂದ ಜನರ ಪಾಲಿಗೆ ‘ಸುಗ್ರೀವ’ನ ರಕ್ಷಣೆಯೂ ಸಿಕ್ಕಿಲ್ಲ.
‘ಕರ್ನಾಟಕದಲ್ಲಿ ಬಡ ವರ್ಗದ ಶೇ 89ರಷ್ಟು ಜನರು ಮೈಕ್ರೊ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯಲು ಬಯಸುತ್ತಾರೆ’ ಎಂದು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೊಫೈನಾನ್ಸ್ ಇನ್ಸ್ಟಿಟ್ಯೂಷನ್ಸ್ (ಎಕೆಎಂಐ– ಅಕ್ಮಿ) 2023ರಲ್ಲಿ ಬಿಡುಗಡೆ ಮಾಡಿದ್ದ ವರದಿ ಹೇಳಿದೆ.
ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳಿಂದ ಸಾಲ ಪಡೆಯಲು ಆಗದೇ ಇರುವವರಿಗೆ ಸಣ್ಣಪುಟ್ಟ ಉದ್ಯಮ, ಸ್ವ–ಉದ್ಯೋಗ, ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಮದುವೆಯಂತಹ ಅಗತ್ಯಗಳಿಗೆ ಸಾಲಪಡೆಯಬೇಕಾದ ಜನರ ಅನಿವಾರ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಮೈಕ್ರೊ ಫೈನಾನ್ಸ್ ಕಂಪನಿಗಳು ಹಾಗೂ ಲೇವಾದೇವಿದಾರರು ಜನರ ಸುಲಿಗೆ ಮಾಡುತ್ತಿರುವುದು ವರದಿಯಾಗುತ್ತಿವೆ.
ಸಾಲ ಕೊಡಲು ರಾಷ್ಟ್ರೀಕೃತ ಬ್ಯಾಂಕುಗಳು ತಿಂಗಳುಗಟ್ಟಲೇ ಅಲೆದಾಡಿಸುತ್ತವೆ. ಅಷ್ಟೇ ಅಲ್ಲ, ಅಲ್ಲಿಂದ ಸಾಲ ಪಡೆಯಲು ಹಲವು ನಿಯಮಗಳನ್ನು ಪಾಲಿಸಲೇಬೇಕು. ಅರ್ಹತೆಯೇ ದೊಡ್ಡ ತೊಡಕು. ಈ ಕಾರಣಕ್ಕೆ ಬಡವರು, ಸಣ್ಣ ವ್ಯಾಪಾರಿಗಳು, ಕೂಲಿಯವರು, ಆರ್ಥಿಕ ಶಕ್ತಿ ಇಲ್ಲದವರು ಅಲ್ಲಿ ಸಾಲ ಪಡೆಯುವುದು ಕಷ್ಟ. ಅಂಥವರಿಗೆ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರೇ ಆಧಾರ.
ಬಹುತೇಕ ಮೈಕ್ರೊ ಫೈನಾನ್ಸ್ ಕಂಪನಿಗಳ ನಾಮಫಲಕಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ನಿಂದ (ಆರ್ಬಿಐ) ಅನುಮತಿ ಪಡೆದು ಈ ಸಂಸ್ಥೆಗಳು ವಹಿವಾಟು ನಡೆಸುತ್ತವೆ. ರಾಜ್ಯ ಸರ್ಕಾರಗಳಿಗೂ ಅವುಗಳ ಮೇಲೆ ನಿಯಂತ್ರಣ ಇರುವುದಿಲ್ಲ. ಆರ್ಬಿಐ ಅನುಮತಿ ನೀಡುವ ಕಾರಣ ಮೈಕ್ರೊ ಫೈನಾನ್ಸ್ ಕಂಪನಿಗಳ ವಿರುದ್ಧ ಆರ್ಬಿಐನಲ್ಲೇ ದೂರು ನೀಡಬೇಕು. ಆರ್ಬಿಐನವರೇ ಈ ಕಂಪನಿಗಳ ಮೇಲ್ವಿಚಾರಣೆ ಮಾಡಬೇಕು. ಕಂಪನಿಗಳ ವಿರುದ್ಧ ಆನ್ಲೈನ್, ಇ–ಮೇಲ್ ಮತ್ತು ಖುದ್ದಾಗಿ ಕಚೇರಿಗೆ ತೆರಳಿ ದೂರು ನೀಡಲು ಅವಕಾಶವಿದೆ. ಆದರೆ, ಬಡ ಸಾಲಗಾರನಿಗೆ ಅದರ ಅರಿವು ಇಲ್ಲ. ಸಾಲ ಮರುಪಾವತಿ ಮಾಡದ ಕಾರಣ ದೂರು ನೀಡುವುದಕ್ಕೂ ಹಿಂಜರಿಯುತ್ತಾರೆ. ಹೀಗಾಗಿ, ದೂರು ನೀಡುವ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ.
ನಿಯಮ ಉಲ್ಲಂಘನೆಯ ಪರಿ...
ಮೈಕ್ರೊ ಫೈನಾನ್ಸ್ ಕಂಪನಿಗಳು, ಸಾಲದ ಮೇಲೆ ನಿಗದಿತ ಮಿತಿಗಿಂತ ಹಲವು ಪಟ್ಟು ಬಡ್ಡಿ
ಸಾಲ ವಸೂಲು ಮಾಡಲು ದೌರ್ಜನ್ಯ, ಕಿರುಕುಳ, ಹಿಂಸೆ
ಒಬ್ಬನೇ ವ್ಯಕ್ತಿಗೆ 3ರಿಂದ 4 ಮೈಕ್ರೊ ಫೈನಾನ್ಸ್ ಕಂಪನಿಗಳು ಸಾಲ ಮಂಜೂರು
ಗ್ರಾಹಕನ ಮರುಪಾವತಿ ಸಾಮರ್ಥ್ಯ ನಿರ್ಣಯಿಸದೆ ಸಾಲ ನೀಡುವುದರಿಂದ, ಮರುಪಾವತಿ ಕಷ್ಟವಾಗಿ ಹೆಚ್ಚುವ ಹೊರೆ
ಕೆಲವು ಮೈಕ್ರೊ ಫೈನಾನ್ಸ್ ಕಂಪನಿಗಳು ಅನಧಿಕೃತವಾಗಿ ಠೇವಣಿ ಸ್ವೀಕರಿಸುತ್ತಿರುವುದು
ಸಾಲ ನೀಡುವಾಗ ನಿಯಮಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ವಿವರಿಸದಿರುವುದು
ನಿಯಮ ಕಾಗದಕ್ಕಷ್ಟೇ ಸೀಮಿತ
ಎಷ್ಟು ಸಾಲ? ಎಷ್ಟು ಬೇಗ ಬೇಕು? ಎಷ್ಟು ಅವಧಿಯಲ್ಲಿ ಮರುಪಾವತಿ? ಎನ್ನುವುದರ ಮೇಲೆ ಮೈಕ್ರೊ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ಸಾಲ ನೀಡುತ್ತವೆ.
ಯಾವುದೇ ಬ್ಯಾಂಕೇತರ ಸಂಸ್ಥೆಯನ್ನು ‘ಮೈಕ್ರೊ ಫೈನಾನ್ಸ್ ಕಂಪನಿ’ ಎಂದು ಪರಿಗಣಿಸುವಾಗ ವ್ಯಕ್ತಿಗಳಿಗೆ ನೀಡುವ ಸಾಲದ ಮಿತಿ ₹3 ಲಕ್ಷ ಮೀರಬಾರದು ಎಂಬ ನಿಯಮವಿದೆ. ಅದು ಭದ್ರತೆ ರಹಿತ ಸಾಲವಾಗಿರಬೇಕು. ಆದರೆ, ರಾಜ್ಯದ ಸಾಲದಾತರು ನಿಯಮಗಳನ್ನು ಉಲ್ಲಂಘಿಸಿ, ಪರಸ್ಪರರ ಒಪ್ಪಿಗೆ ಮೇಲೆ ₹10 ಸಾವಿರದಿಂದ ₹10 ಲಕ್ಷದವರೆಗೂ ಸಾಲ ನೀಡಿದ್ದಾರೆ. ಹೀಗಾಗಿ, ನಿಯಮಗಳು ಇಲ್ಲಿ ಕಾಗದಕ್ಕಷ್ಟೇ ಸೀಮಿತ. ಗರಿಷ್ಠ ವಾರ್ಷಿಕ ಬಡ್ಡಿ ಶೇ 24 ದಾಟಬಾರದೆಂಬ ನಿಯಮವಿದ್ದರೂ ಗರಿಷ್ಠ ವಾರ್ಷಿಕ ಶೇ 28ರ ಬಡ್ಡಿ ವಿಧಿಸುತ್ತಿವೆ. ಮರುಪಾವತಿ ಮಾಡದೇ ಇದ್ದಾಗ ಬಡ್ಡಿಯ ಮೇಲೆ ಬಡ್ಡಿ (ಚಕ್ರ ಬಡ್ಡಿ) ಸೇರುವುದರಿಂದ ಬಾಕಿ ಮೊತ್ತ ಬೆಟ್ಟದಂತೆ ಬೆಳೆಯುತ್ತಲೇ ಹೋಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.