ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಹಣದಲ್ಲಿ ₹100 ಕೋಟಿವೆಚ್ಚದ ಮನೆ ಕಟ್ಟಿ, ಅದೇ ಹಣದಲ್ಲಿ ಬಿಎಸ್ಆರ್ ಪಕ್ಷ ಕಟ್ಟಿ ಇದೀಗ ಶಾಂತ ದೆಹಲಿಗೆ ಡಿಕೆಶಿ ಜೈಲಿಗೆ ಎನ್ನುವ ಹೇಳಿಕೆ ನೀಡಿರುವ ಶ್ರೀರಾಮುಲು ದೊಡ್ಡ ಕಲಾಕಾರ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೆಮಠ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಶ್ರೀರಾಮುಲು ಸಹ ಭೂಒತ್ತವರಿ ಹಗರಣದಲ್ಲಿ ಭಾಗಿಯಾಗಿದ್ದು ಹಿಂದೆ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಲುಕದೇ ಜನಾರ್ದನ ರೆಡ್ಡಿಯನ್ನು ಮುಂದೆ ಬಿಟ್ಟ ಕಲಾಕಾರ ಎಂದರು.
₹100ಕೋಟಿವೆಚ್ಚದ ಮನೆ ಹಾಗೂ ಬಿಎಸ್ ಅರ್ ಪಕ್ಷ ಕಟ್ಟಲು ಹಣ ಎಲ್ಲಿಂದ ಬಂತು? ತಮ್ಮ ಅಧಿಕಾರದ ದಾಹಕ್ಕೆ ರಾಜೀನಾಮೆ ನೀಡುತ್ತಾ ಜನರ ದುಡ್ಡು ಪೋಲು ಮಾಡುವ ಇವರಿಗೆ ಜನರು ಉಪಚುನಾಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
**
ಅಕ್ರಮ ನೇಮಕಾತಿ: ಸಹಾಯಕ ಅಭಿಯೋಜಕರ ಅಮಾನತ್ತಿಗೆ ಹಿರೇಮಠ್ ಆಗ್ರಹ
2014ರಲ್ಲಿ ಅಕ್ರಮವಾಗಿ ನೇಮಕಗೊಂಡ ಆರೋಪ ಎದುರಿಸುತ್ತಿರುವ 63 ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ಪ್ಲೀಡರ್ಗಳನ್ನು ಅಮಾನತು ಮಾಡಬೇಕುಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮಕ್ಕೆಕಾರಣರಾದ ಅಂದಿನ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರಿ ನಿರ್ದೇಶಕ ಚಂದ್ರ ಶೇಖರ ಜಿ ಹಿರೇಮಠ ಮತ್ತು ಆಡಳಿತಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು. ಈಗ ನಿವೃತ್ತರಾಗಿರುವ ಚಂದ್ರಶೇಖರ ಅವರ ಪಿಂಚಣಿಯನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.
'ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಎರಡನೇ ಆರೋಪಿ ನಾರಾಯಣಸ್ವಾಮಿ ಅವರನ್ನು ಅಭಿಯೋಗ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಕೇಂದ್ರ ಸ್ಥಾನಿಕ ಸಹಾಯಕರ ಹುದ್ದೆಗೆ ಪ್ರಭಾರ ವಹಿಸಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಜುಲೈನಲ್ಲಿ ಶಿಫಾರಸು ಪತ್ರ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿರುವುದು ಆಡಳಿತ ಕುಸಿದಿರುವುದನ್ನು ಸೂಚಿಸುತ್ತದೆ ಎಂದು ವಿಷಾದಿಸಿದರು. ಲೋಕಾಯುಕ್ತ ಬಲಪಡಿಸಲು ಸರ್ಕಾರ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.