ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡವೇ ‘ಕಬ್ಬಿಣದ ಕಡಲೆ’!

ಮಾತೃಭಾಷೆ ಕನ್ನಡದಲ್ಲಿ 1.32 ಲಕ್ಷ ಮಂದಿ ನಪಾಸು

ಸಿದ್ದು ಆರ್.ಜಿ.ಹಳ್ಳಿ
Published 9 ಮೇ 2025, 21:09 IST
Last Updated 9 ಮೇ 2025, 21:09 IST
ಹತ್ತನೇ ತರಗತಿಯ ಪ್ರಥಮಭಾಷಾ ಪಠ್ಯಪುಸ್ತಕದ ಮುಖಪುಟ 
ಹತ್ತನೇ ತರಗತಿಯ ಪ್ರಥಮಭಾಷಾ ಪಠ್ಯಪುಸ್ತಕದ ಮುಖಪುಟ    

ಮಂಡ್ಯ: ರಾಜ್ಯದಲ್ಲಿ 2024–25ನೇ ಸಾಲಿನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿಯ ‘ಕನ್ನಡ’ ಭಾಷೆ ಪರೀಕ್ಷೆಯಲ್ಲಿ ಬರೋಬ್ಬರಿ 1.32 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅವರಿಗೆ ಮಾತೃಭಾಷೆಯೇ ‘ಕಬ್ಬಿಣದ ಕಡಲೆ’ಯಾಗಿದೆ.

ಈ ಬಾರಿ ಕನ್ನಡ ಭಾಷೆ ಪರೀಕ್ಷೆ ಬರೆದಿದ್ದ 6.28 ಲಕ್ಷ ವಿದ್ಯಾರ್ಥಿಗಳ ಪೈಕಿ, 4.96 ಲಕ್ಷ (ಶೇ 79ರಷ್ಟು) ಮಂದಿ ತೇರ್ಗಡೆಯಾಗಿದ್ದಾರೆ. ಶೇ 21ರಷ್ಟು ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ‘ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ’ ಎನಿಸಿರುವ ಮಂಡ್ಯದಲ್ಲಿ 3,101 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಇಂಗ್ಲಿಷ್‌ ವಿಷಯದಲ್ಲೂ ಶೇ 21ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹಿಂದಿ ವಿಷಯದಲ್ಲಿ ಶೇ 80ರಷ್ಟು ಮಂದಿ ಪಾಸಾಗಿದ್ದಾರೆ. ಕನ್ನಡಕ್ಕಿಂತ ಹಿಂದಿ ಪರೀಕ್ಷೆಯಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ADVERTISEMENT

ಕನ್ನಡ ಮಾಧ್ಯಮದಲ್ಲೂ ಹಿನ್ನಡೆ

‘ಕನ್ನಡ ಮಾಧ್ಯಮ’ದಲ್ಲಿ ಪರೀಕ್ಷೆ ಬರೆದ 4.27 ಲಕ್ಷ ವಿದ್ಯಾರ್ಥಿಗಳಲ್ಲಿ 2.46 ಲಕ್ಷ ಮಕ್ಕಳು (ಶೇ 57.61ರಷ್ಟು) ಉತ್ತೀರ್ಣರಾಗಿದ್ದಾರೆ. ‘ಇಂಗ್ಲಿಷ್ ಮಾಧ್ಯಮ’ದಲ್ಲಿ ಪರೀಕ್ಷೆ ಬರೆದ 3.35 ಲಕ್ಷ ವಿದ್ಯಾರ್ಥಿಗಳಲ್ಲಿ 2.63 ಲಕ್ಷ ವಿದ್ಯಾರ್ಥಿಗಳು (ಶೇ 78.38ರಷ್ಟು) ಪಾಸಾಗಿದ್ದಾರೆ. ಅಂದರೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳು ಶೇ 21ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶೇಷವೆಂದರೆ, ರಾಜ್ಯದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಿಂತ, ತೆಲುಗು ಮಾಧ್ಯಮ ವಿದ್ಯಾರ್ಥಿಗಳೇ (ಶೇ 74.56 ಫಲಿತಾಂಶ) ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಹಿಂದಿ ಮಾಧ್ಯಮ ವಿದ್ಯಾರ್ಥಿಗಳ ಉತ್ತೀರ್ಣದ ಪ್ರಮಾಣ ಶೇ 53.72ರಷ್ಟಿದೆ. 

ಕನ್ನಡವೇ ಪ್ರಧಾನವಾಗಿರುವ ‘ಪ್ರಥಮ ಭಾಷೆ’ ಪತ್ರಿಕೆಯಲ್ಲಿ 9,573 ವಿದ್ಯಾರ್ಥಿಗಳು ಪೂರ್ಣಾಂಕ (ನೂರಕ್ಕೆ ನೂರು ಅಂಕ) ಪಡೆದರೆ, ಹಿಂದಿಯೇ ಪ್ರಧಾನವಾಗಿರುವ ‘ತೃತೀಯ ಭಾಷೆ’ ಪತ್ರಿಕೆಯಲ್ಲಿ ಬರೋಬ್ಬರಿ 17,909 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ. 

ಸರ್ಕಾರಿ ಶಾಲೆಗಳಿಗೆ ಹಿನ್ನಡೆ

‘ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೇ 62.7ರಷ್ಟು, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಯ 58.97ರಷ್ಟು ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಯ ಶೇ 75.59ರಷ್ಟು ಪ್ರಮಾಣದಲ್ಲಿ ತೇರ್ಗಡೆ ಆಗಿದ್ದಾರೆ. ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಪರಿಣಾಮಕಾರಿ ಬೋಧನೆಗೆ ಒತ್ತು ನೀಡಬೇಕಿದೆ’ ಎನ್ನುತ್ತಾರೆ ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌. 

ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 

ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗೆ ಹಿನ್ನಡೆ ಮತ್ತು ‘ಕನ್ನಡ’ದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣ ಆಗಿರುವುದಕ್ಕೆ ಕಾರಣ ಪತ್ತೆ ಹಚ್ಚುತ್ತೇವೆ. ಶಿಕ್ಷಕರಿಗೆ ವಿಶೇಷ ತರಬೇತಿ ನೀಡುತ್ತೇವೆ –

–ಎಚ್‌.ಶಿವರಾಮೇಗೌಡ ಡಿಡಿಪಿಐ ಮಂಡ್ಯ

‘ಸರಳವಾಗಲಿ ಕನ್ನಡ ಪಠ್ಯಕ್ರಮ’ ‘ಕನ್ನಡ ವಿಷಯದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಆತಂಕಕಾರಿ ಬೆಳವಣಿಗೆ. ಹಿಂದಿ ಸಂಸ್ಕೃತಕ್ಕೆ ಹೋಲಿಸಿದರೆ ಕನ್ನಡ ಪಠ್ಯಕ್ರಮ ಕಷ್ಟಕರ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದರು. ‘ಕನ್ನಡ ಹೇಳಿಕೊಡಲು ಕಷ್ಟವೆಂದು ಪೋಷಕರೇ ಅಳಲು ತೋಡಿಕೊಳ್ಳುತ್ತಾರೆ. ಹೀಗಾಗಿ ಪಠ್ಯಕ್ರಮ ಸರಳವಾಗಿರಬೇಕು. ಬೋಧನಾ ಕ್ರಮ ಬದಲಾಗಬೇಕು ಅಧ್ಯಾಪಕರಿಗೆ ತರಬೇತಿ ನೀಡಬೇಕು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡುವ ಅನುದಾನ ಹೆಚ್ಚಬೇಕು. ಶಿಕ್ಷಣದ ಅಭಿವೃದ್ಧಿ ಸರ್ಕಾರದ 6ನೇ ಗ್ಯಾರಂಟಿಯಾಗಬೇಕು’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.