ಬೆಂಗಳೂರು: ‘ನನ್ನ ಹೆದರಿಸೊ ಮಗ ಇನ್ನೂ ಹುಟ್ಟಿ ಬಂದಿಲ್ಲ. ಬಿಜೆಪಿಯವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ನಾನು ಯಾವುದಕ್ಕೂ ಹೆದರುವುದಿಲ್ಲ’ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
‘ಬಿಜೆಪಿ ನಾಯಕರು ಏನೇನು ಮಾಡಿದ್ದಾರೆ ಎನ್ನುವ ಎಲ್ಲ ವಿಚಾರಗಳೂ ನನಗೆ ಗೊತ್ತು. ನನ್ನ ತಂಟೆಗೆ ಬಂದರೆ ಎಲ್ಲವನ್ನು ಬಿಚ್ಚಿಡಬೇಕಾಗುತ್ತದೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ಎಚ್ಚರಿಕೆ ನೀಡಿದರು.
‘ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿಯೇ ಮತ ಹಾಕಿದ್ದೇನೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನವರು ಬಿಜೆಪಿಗೆ ಮತ ಹಾಕಿಲ್ಲವೇ? ಅಲ್ಲಿಗೊಂದು ನ್ಯಾಯ, ಇಲ್ಲಿಗೊಂದು ನ್ಯಾಯವೇ. ಬಿಜೆಪಿ ನನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅನರ್ಹತೆಯನ್ನಾದರೂ ಮಾಡಲಿ, ಉಚ್ಚಾಟನೆಯನ್ನಾದರೂ ಮಾಡಲಿ’ ಎಂದು ಸವಾಲು ಹಾಕಿದರು.
‘ಕ್ಷೇತ್ರದ ಜನತೆಗೆ ವಿಶ್ವಾಸದ್ರೋಹ ಮಾಡಿಲ್ಲ. ಬಿಜೆಪಿಗೆ ಸೇರುವ ಮೊದಲೂ ಆ ಕ್ಷೇತ್ರದಿಂದಲೇ ಗೆದ್ದಿದ್ದೇನೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದಾಗ ವಿಶ್ವಾಸದ್ರೋಹ ಆಗಲಿಲ್ಲವೆ? ಈಗ ಮಾತ್ರ ವಿಶ್ವಾಸದ್ರೋಹ ಆಗಿದೆಯೇ’ ಎಂದೂ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.