ADVERTISEMENT

ಕೋವಿಡ್‌–19 | ಬೆಳಗಾವಿ: ಚಿತೆಗೆ ಶವಗಳನ್ನು ಸುರಿದ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 12:56 IST
Last Updated 26 ಜುಲೈ 2020, 12:56 IST
ಚಿತೆಗೆ ಶವಗಳನ್ನು ಸುರಿದ ಸಿಬ್ಬಂದಿ!
ಚಿತೆಗೆ ಶವಗಳನ್ನು ಸುರಿದ ಸಿಬ್ಬಂದಿ!   

ಬೆಳಗಾವಿ: ಕೋವಿಡ್ ಸೋಂಕಿನಿಂದ ಮೃತರಾದ ಇಬ್ಬರ ಶವಗಳನ್ನು ನಗರಪಾಲಿಕೆಯ ಸಿಬ್ಬಂದಿಯು ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಸಿದ್ಧಪಡಿಸಿದ್ದ ಚಿತೆಗೆ ಮಣ್ಣಿನಂತೆ ಸುರಿದಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ವೈರಲ್ ಆಗಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತರಾದ ನಗರ ಹಾಗೂ ರಾಯಬಾಗದ ಇಬ್ಬರ ಶವಗಳನ್ನು ತೆರೆದ ಸ್ಥಳದಲ್ಲಿ ಸುಡಲಾಯಿತು. ಈ ವೇಳೆ ಸಿಬ್ಬಂದಿಯು ಗೌರವಯುತವಾಗಿ ಸಂಸ್ಕಾರ ನಡೆಸಲಿಲ್ಲ ಎಂದು ಹೇಳಲಾಗುತ್ತಿದೆ. ಮೊಬೈಲ್‌ ಫೋನ್‌ನಲ್ಲಿ ಸೆರೆಯಾದ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲೂ ಹರಿದಾಡುತ್ತಿದೆ. ಸಿಬ್ಬಂದಿಯ ನಡೆಗೆ ಅಸಮಾಧಾನ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ಬಸವರಾಜ ದಬಾಡೆ, ‘ಸ್ಥಳದಲ್ಲಿ ಖುದ್ದಾಗಿ ನಾನೇ ಇದ್ದೆ. ಮಾರ್ಗಸೂಚಿಗಳ ಪ್ರಕಾರ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆದಿದೆ. ಸ್ಟೆಚರ್‌ನಿಂದ ಚಿತೆಗೆ ಹಾಕುವುದನ್ನೇ ಎಸೆಯಲಾಗಿದೆ; ಅವಮಾನಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಂಬಿಸಲಾಗಿದೆ. ಕೋವಿಡ್ ಭೀತಿಯ ನಡುವೆಯೂ ಕೆಲಸ ಮಾಡುವ ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿಸುವಂತಹ ಟೀಕೆಗಳನ್ನು ಮಾಡಬಾರದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.