ಬೆಂಗಳೂರು: ಲೋಕಸಭಾ ಚುನಾವಣೆಫಲಿತಾಂಶ ಕುರಿತು ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರು ಅಭಿವೃದ್ಧಿ ಪರ ಆಡಳಿತ ನಡೆಸಲಿಲ್ಲ. ಅವರು ಪ್ರಚಾರದಲ್ಲೇ ಆಡಳಿತ ಮಾಡಿದ್ದಾರೆ. ಸಾಕಷ್ಟು ಸಮಸ್ಯೆಗಳಿದರೂ ಅವರಿಗೆ ಇಷ್ಟೊಂದು ಅಂಕಿ ಸಂಖ್ಯೆ ತೋರಿಸಿರುವುದು ಆಶ್ಚರ್ಯ ಮೂಡಿಸಿದೆ’ ಎಂದರು.
ಇತ್ತೀಚಿಗೆ ಆಸ್ಟ್ರೇಲಿಯದಲ್ಲೂ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜ ಹೇಳಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಅಂತ ಹೇಳಲ್ಲ. ಕರ್ನಾಟಕದಲ್ಲಿ ಈ ಸಮೀಕ್ಷೆಗಳು ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ. ಈ ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ ಎಂದರು.
ಮೇ.23ರ ತನಕ ಕಾದು ನೋಡೋಣ. ಅಂದು ನಿಜವಾದ ಸಮೀಕ್ಷೆ ಬರುತ್ತದೆ. ನಮಗೆ ರಾಜ್ಯ, ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
'ಎಕ್ಸಿಟ್ ಪೋಲ್ ನಾಟ್ ಎ ಎಕ್ಸಾಟ್ ಪೋಲ್'. ಮೂಡ್ ಸೆಟ್ ಮಾಡಿ, ಇವಿಎಂಗಳನ್ನು ತಿರುಚುವ ಹುನ್ನಾರ ಇದಾಗಿದೆ. ಚಂದ್ರಬಾಬು ನಾಯ್ಡು ಸಹ ಇದನ್ನೇ ಪದೇ ಪದೇ ಹೇಳುತ್ತಲೇ ಇದ್ದಾರೆ. ಚಾನಲ್ಗಳಲ್ಲಿ ಮೋದಿ ಅಲೆ ಇದೆ.ಮೇ.23ರ ಬಳಿಕ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ’ ಎಂದು ರಾಜ್ಯಸಭಾ ಸದಸ್ಯ ಕಾಂಗ್ರೆಸ್ಸಿನ ಬಿ.ಕೆ ಹರಿಪ್ರಸಾದ್ ಹೇಳಿದರು.
ಡಿಕೆಶಿ ವಿದೇಶ ಪ್ರವಾಸ: ಕುಟುಂಬ ಸದಸ್ಯರ ಜೊತೆ ಸಚಿವ ಡಿ.ಕೆ.ಶಿವಕುಮಾರ್ ಒಂದು ವಾರ ಕಾಲ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.