ADVERTISEMENT

₹31,676 ಕೋಟಿ ಹೂಡಿಕೆ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 21:31 IST
Last Updated 28 ಆಗಸ್ಟ್ 2020, 21:31 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ‘ಕೋವಿಡ್‌ ಲಾಕ್‌ಡೌನ್ ನಿರ್ಬಂಧಗಳ ನಡುವೆಯೂ ರಾಜ್ಯದಲ್ಲಿ ₹31,676 ಕೋಟಿ ಬಂಡವಾಳ ಹೂಡಿಕೆ ಆಗಲಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಇದರಿಂದ 65,459 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಅವರು ‘ಕೈಗಾರಿಕಾ ಅಭಿವೃದ್ಧಿಯ ಒಂದು ವರ್ಷಗಳ ಸಾಧನೆ’ ಕುರಿತ ಪುಸ್ತಕ ಬಿಡುಗಡೆ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ತಂದಿರುವ ಹೊಸ ಕೈಗಾರಿಕಾ ನೀತಿ ಮತ್ತು ಕ್ರಮಗಳಿಂದಾಗಿ ಸಂಕಷ್ಟದ ನಡುವೆಯೂ ಉತ್ತಮ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗುತ್ತಿದೆ. ಸೂಕ್ಷ್ಮ, ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಸೌಲಭ್ಯಗಳ ಅಧಿನಿಯಮ 2020 ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮದು. ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯ್ದೆ, ಭೂಪರಿವರ್ತನೆಯ ನಿಯಮಗಳ ಮತ್ತು ಸುಲಲಿತ ವ್ಯವಹಾರದ ಉಪಕ್ರಮಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಾಗಿದೆ’ ಎಂದು ಶೆಟ್ಟರ್‌ ತಿಳಿಸಿದರು.

ADVERTISEMENT

ರಾಜ್ಯವನ್ನು ಕೈಗಾರಿಕೆ ಹೂಡಿಕೆದಾರರ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಒಯ್ಯುವ ಗುರಿ ನಮ್ಮದು. 2 ಮತ್ತು 3 ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಮೂಲಕ 11 ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಜತೆಗೆ ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುವುದು ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.