ADVERTISEMENT

ಬೆಳಗಾವಿ | ಆಂಬುಲೆನ್ಸ್‌ಗೆ ಬೆಂಕಿ ಪ್ರಕರಣ, 14 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 13:00 IST
Last Updated 23 ಜುಲೈ 2020, 13:00 IST
ಸುಟ್ಟು ಕರಕಲಾಗಿದ್ದ ಆಂಬುಲೆನ್ಸ್
ಸುಟ್ಟು ಕರಕಲಾಗಿದ್ದ ಆಂಬುಲೆನ್ಸ್   

ಬೆಳಗಾವಿ: ‘ಇಲ್ಲಿನ ಬಿಮ್ಸ್‌ ಆಸ್ಪತ್ರೆ ಎದುರಿಗೆ ಬುಧವಾರ ರಾತ್ರಿ ಆಂಬುಲೆನ್ಸ್‌ಗೆ ಬೆಂಕಿ ಇಟ್ಟು, ಆಸ್ಪತ್ರೆ ಒಳ ನುಗ್ಗಿ ಗಲಾಟೆ ಮಾಡಿ, ಕಲ್ಲು ತೂರಾಟ ನಡೆಸಿ ಶಾಂತಿ ಕದಡಲು ಯತ್ನಿಸಿದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಟಿ.ತ್ಯಾಗರಾಜನ್‌ ತಿಳಿಸಿದ್ದಾರೆ.

‘ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಬಿಮ್ಸ್‌ ಆಸ್ಪತ್ರೆಗೆ ಜುಲೈ 19ರಂದು ದಾಖಲಿಸಲಾಗಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು. ಗಂಟಲು ದ್ರವದ ಮಾದರಿಯ ಪರೀಕ್ಷೆಯ ನಂತರ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಕೋವಿಡ್ ವಾರ್ಡ್‌ನಲ್ಲಿ ಅವರಿಗೆ ಉಪಚಾರ ನೀಡಲಾಗುತ್ತಿತ್ತು. ಅವರು ಬುಧವಾರ ತೀವ್ರ ಉಸಿರಾಟದ ತೊಂದರೆಯಿಂದ ಮೃತರಾಗಿದ್ದರು. ಸಾವಿನ ಸುದ್ದಿ ತಿಳಿದ ತಕ್ಷಣ ಅವರ ಸಂಬಂಧಿಕರು 15ರಿಂದ 20 ಮಂದಿ ದ್ವಿಚಕ್ರವಾಹನಗಳಲ್ಲಿ ಮೇಲೆ ಗಲಾಟೆ ಮಾಡಿದ್ದಾರೆ. ಕಲ್ಲು ತೂರಿದ್ದರಿಂದ ಆಸ್ಪತ್ರೆಯ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2 ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.