ADVERTISEMENT

ವಿದ್ಯಾರ್ಥಿ ಹತ್ಯೆ ಪ್ರಕರಣ | ಶಿಕ್ಷಕ ಮುತ್ತಪ್ಪ ಹಡಗಲಿ ಬಂಧನ

ನರಗುಂದ: ನಾಲ್ಕನೇ ತರಗತಿ ವಿದ್ಯಾರ್ಥಿ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 21:45 IST
Last Updated 20 ಡಿಸೆಂಬರ್ 2022, 21:45 IST
ಮುತ್ತಪ್ಪ ಹಡಗಲಿ
ಮುತ್ತಪ್ಪ ಹಡಗಲಿ   

ಗದಗ: ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿ, ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮುತ್ತಪ್ಪ ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್‌ ಬಳಿ ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ ಅವರ ನಡುವೆ ಮೊದಲಿನಿಂದಲೂ ಸಲುಗೆ ಇತ್ತು. ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜತೆಗೆ ಆಪ್ತವಾಗಿ ನಡೆದುಕೊಂಡಿದ್ದು, ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿ ಸಾವಿಗೆ ಕಾರಣನಾದ ಆರೋಪಿ ಮುತ್ತಪ್ಪನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಿಸಲಾಗಿ, ಗೀತಾ ಮತ್ತು ನನ್ನ ನಡುವೆ ಸಲುಗೆ ಇತ್ತು ಎಂದು ತಿಳಿಸಿದ್ದಾನೆ. ಅಲ್ಲದೇ, ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಆಕೆ ಸಹ ಶಿಕ್ಷಕನೊಂದಿಗೆ ಆಪ್ತವಾಗಿ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವ‍ಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.

‘ಮುತ್ತಪ್ಪ ಮತ್ತು ಗೀತಾ ನಡುವೆ ನಡೆದಿರುವ ವಾಟ್ಸ್‌ಆ್ಯಪ್‌ ಚಾಟ್‌, ಫೋನ್ ಕಾಲ್‌ ಹಿಸ್ಟರಿ ಸಿಕ್ಕಿದೆ. ಆದರೆ, ಆರೋಪಿ ಹೇಳುವಂತೆ ಇವರಿಬ್ಬರ ನಡುವೆ ಸಲುಗೆ ಇತ್ತೇ ಎಂಬುದು ದೃಢಪಡಲು ಇನ್ನಷ್ಟು ಸಾಕ್ಷಿ, ಮಾಹಿತಿ ಕಲೆ ಹಾಕಬೇಕಿದೆ. ಈಗ ಸಿಕ್ಕಿರುವ ಹೇಳಿಕೆ ಪ್ರಕಾರ ಆತ ಗೀತಾ ಮೇಲಿನ ಮೋಹದಿಂದ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ’ ಎಂದು ಅವರು ತಿಳಿಸಿದ್ದಾರೆ.

ಇಬ್ಬರ ನಡುವಿನ ಸಲುಗೆ ಹೊರತು ಪಡಿಸಿ ಕೊಲೆ ಹಾಗೂ ಹಲ್ಲೆಗೆ ಬೇರೆ ಕಾರಣ ಇತ್ತೇ ಎಂಬುದು ಹೆಚ್ಚಿನ ವಿಚಾರಣೆ ಬಳಿಕ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

‘ಹಲ್ಲೆಗೊಳಗಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಗೀತಾ ಬಾರಕೇರ ಅವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಸಂಬಂಧಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.