ಶಿರಸಿ: ನಿಷೇಧವಿದ್ದರೂ ಕಾಲೇಜಿಗೆ ಮೊಬೈಲ್ ಫೋನ್ಗಳನ್ನು ತಂದ ವಿದ್ಯಾರ್ಥಿಗಳ ವಿರುದ್ಧ ಇಲ್ಲಿನ ಎಂ.ಇ.ಎಸ್ ಚೈತನ್ಯ ಪಿ.ಯು ಕಾಲೇಜಿನ ಪ್ರಾಂಶುಪಾಲರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎರಡು ಮೊಬೈಲ್ ಫೋನ್ಗಳನ್ನು ಸುತ್ತಿಗೆಯಿಂದ ಹೊಡೆದು ಪುಡಿ ಮಾಡಿದ್ದಾರೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಾಲೇಜಿನಲ್ಲಿಗುರುವಾರ ವಿದ್ಯಾರ್ಥಿಗಳ ಚೀಲ, ಜೇಬನ್ನು ತಪಾಸಣೆ ಮಾಡಿದಾಗ ಕೆಲವರ ಬಳಿ ಮೊಬೈಲ್ ಫೋನ್ಗಳು ಪತ್ತೆಯಾದವು. ಅವುಗಳನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಎಂ.ಭಟ್ ವಶಕ್ಕೆಪಡೆದರು. ಅವುಗಳ ಪೈಕಿ ಎರಡನ್ನು ವಿದ್ಯಾರ್ಥಿಗಳ ಎದುರೇ ಮೇಜಿನಲ್ಲಿಟ್ಟು ಸುತ್ತಿಗೆಯಿಂದ ಹೊಡೆದು ಪುಡಿ ಮಾಡಿದರು. ಬಳಿಕ ಮೊಬೈಲ್ ಫೋನ್ನ ನಿರಂತರ ಬಳಕೆಯಿಂದಆಗುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ ನೀಡಿ ಅರಿವು ಮೂಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಎಂ.ಭಟ್, ‘ವಿದ್ಯಾರ್ಥಿಗಳು ಕಾಲೇಜಿಗೆ ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಕೆಲವು ವಿದ್ಯಾರ್ಥಿಗಳು ಮಾತು ಕೇಳಲಿಲ್ಲ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.