
ಬಿ.ವೈ.ವಿಜಯೇಂದ್ರ
ಬೆಂಗಳೂರು: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆಗೆ ಸಭೆಯ ನಂತರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಬಿಜೆಪಿ ಸ್ವಾಗತಿಸುತ್ತದೆ. ಇದು ರೈತರು ಮತ್ತು ರೈತ ಸಂಘಟನೆಗಳಿಗೆ ದೊರೆತ ಜಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವನಿಗದಿಯಾಗಿದ್ದ ತುಮಕೂರಿನ ತಮ್ಮ ಪ್ರವಾಸ ಕಾರ್ಯಕ್ರಮವನ್ನು ರದ್ದುಗೊಳಿಸಿ, ಸಭೆ ನಡೆಸಿದ್ದು ಸ್ವಾಗತಾರ್ಹ. ಆದರೆ ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು’ ಎಂದರು.
‘ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ಗೆ ₹50 ಮತ್ತು ಸರ್ಕಾರದ ಕಡೆಯಿಂದ ₹50 ನೀಡುವ ತೀರ್ಮಾನ ಒಳ್ಳೆಯದು. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳಿಂದ ಸರ್ಕಾರಕ್ಕೆ ವಾರ್ಷಿಕ ₹30,000 ಕೋಟಿ ಆದಾಯ ಬರುತ್ತದೆ. ಆದರೆ, ಈ ತೀರ್ಮಾನದಿಂದ ಸರ್ಕಾರಕ್ಕೆ ವಾರ್ಷಿಕ ₹300 ಕೋಟಿ ವೆಚ್ಚವಾಗುತ್ತದೆ’ ಎಂದರು.
‘ವಿಜಯೇಂದ್ರ ಅವರು ಕುಮ್ಮಕ್ಕು ನೀಡಿದ್ದರಿಂದಲೇ ರೈತರು ಪ್ರತಿಭಟನೆ ನಡೆಸಿದರು ಎಂದು ಕೆಲವು ಸಚಿವರು ಸಭೆಯ ವೇಳೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರಂತೆ. ನಾನು ರೈತರಿಗೆ ಕುಮ್ಮಕ್ಕು ನೀಡಿಲ್ಲ. ಪ್ರತಿಭಟನೆ ಆರಂಭವಾಗಿ ಐದು ದಿನವಾದರೂ ಸರ್ಕಾರದಿಂದ ಯಾರೊಬ್ಬರೂ ರೈತರ ಬಳಿಗೆ ಹೋಗಲಿಲ್ಲ. ಹೀಗಾಗಿ, ನಾವು ಅವರ ಹೋರಾಟಕ್ಕೆ ಬೆಂಬಲ ನೀಡಬೇಕಾಯಿತು. ಅಂತಿಮವಾಗಿ ರೈತರಿಗೆ ಅನುಕೂಲವಾಗಿದೆ. ಈಗ ಸರ್ಕಾರವೂ ರೈತರ ಪರವಾದ ತೀರ್ಮಾನ ಮಾಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.