ADVERTISEMENT

ದೇಶಪಾಂಡೆ ಅಲ್ಲ, ಫಟಿಂಗ ಪಾಂಡೆ: ಸುನೀಲ ಹೆಗಡೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 9:52 IST
Last Updated 13 ಮಾರ್ಚ್ 2019, 9:52 IST
   

ಕಾರವಾರ: 'ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಆರ್.ವಿ.ದೇಶಪಾಂಡೆ ಅಲ್ಲ. ಅವರು ಕಮಿಷನ್ ಪಾಂಡೆ. ಫಟಿಂಗ ಪಾಂಡೆ' ಎಂದು ಹಳಿಯಾಳ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸುನೀಲ ಹೆಗಡೆ ವಾಗ್ದಾಳಿ ನಡೆಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೇಶಪಾಂಡೆ ಅವರು ತಾವು ನಡೆದಿದ್ದೇ ದಾರಿ‌‌, ತಾವು ಮಾಡಿದ್ದೇ ಕಾಯ್ದೆ ಎನ್ನುತ್ತಾರೆ. ಜನರಿಗೆ ಬೇಕಾಗಿರುವುದನ್ನು ಒಂದೂ ಮಾಡುವುದಿಲ್ಲ. ಇವರ ಉಸ್ತುವಾರಿಯಲ್ಲಿ ಉತ್ತರ ಕನ್ನಡ ಎಲ್ಲೂ ಅಭಿವೃದ್ಧಿ ಕಂಡಿಲ್ಲ. ಕೇವಲ ಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದು ದೂರಿದರು.

'ಅವರು ಸುಳ್ಳನ್ನೇ ಹೇಳುವ ಕಾರಣ ನನ್ನ ಮಾತನ್ನು ಪುನರುಚ್ಛರಿಸುತ್ತೇನೆ' ಎಂದು ಮತ್ತದೇ ಶಬ್ದಗಳನ್ನು ಹೇಳಿದರು.

ADVERTISEMENT

'ಜನರಿಗೆ ಇ- ಸ್ವತ್ತಿನಿಂದ ಸಮಸ್ಯೆ ಆಗುತ್ತಿದೆ. ಇದನ್ನು ರದ್ದುಪಡಿಸುವುದು ಕಂದಾಯ ಸಚಿವರಾಗಿರುವ ದೇಶಪಾಂಡೆ ಅವರಿಗೆ ದೊಡ್ಡ ಕೆಲಸವೇನು ಅಲ್ಲ. ಆದರೆ, ಅವರು ಅದನ್ನು ತೆಗೆಯಲು ಹೋಗುವುದಿಲ್ಲ. ಕಾರಣ, ಅದರಿಂದ ಅವರಿಗೆ ಕಮಿಷನ್ ಸರಿಯಾಗಿ ಬರುತ್ತಿದೆ. ಇ- ಸ್ವತ್ತು ಹೋದರೆ ತಮ್ಮ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ' ಎಂದು ಕಿಡಿಕಾರಿದರು.

'ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವ ಲೆಕ್ಕವನ್ನು ನಾವು ಕೊಟ್ಟಿದ್ದೇವೆ. ಆದರೆ, ಅವರು ನಿಮ್ಮಂತೆ ಭ್ರಷ್ಟಾಚಾರ ಮಾಡಿಲ್ಲ. ನಿಮ್ಮಂತೆ ಜನರ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ನಿಮ್ಮಂತೆ ಕಮಿಷನ್ ಪಾಂಡೆ ಎಂಬ ಅನ್ವರ್ಥಕ ನಾಮ ಪಡೆದುಕೊಂಡಿಲ್ಲ' ಎಂದು ವ್ಯಂಗ್ಯವಾಡಿದರು.

'ದೇಶಪಾಂಡೆಯವ್ರು ಉಸ್ತುವಾರಿ ಮಂತ್ರಿಗಳಾ? ಅವರಿಗೆ ದೇಶದ ಬಗ್ಗೆ ಗೌರವ ಇದೆಯಾ? ಪುಲ್ವಾಮಾದಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಎರಡೇ ದಿನಕ್ಕೆ ದಾಂಡೇಲಿ ಉತ್ಸವ ನಡೆಯಿತು. ಅಲ್ಲಿ ದೇಶಪಾಂಡೆ ಭಾಗವಹಿಸಿದರು. ದೇಶಪಾಂಡೆ ವಿರುದ್ಧ ಟೀಕೆ ಮಾಡಿದಾಗ ಜಿಲ್ಲೆಯ ತುಂಬಾ ಸುದ್ದಿಗೋಷ್ಠಿ ಮಾಡುವ ಚೇಲಾಗಳು, ಸೈನಿಕರ ಮೇಲೆ ಉಗ್ರರು ದಾಳಿ ಮಾಡಿದಾಗ ಎಲ್ಲಿಗೆ ಹೋಗಿದ್ದರು? ಕಾಂಗ್ರೆಸ್ ನವರು ಜಿಲ್ಲೆಯಲ್ಲಿ ಎಲ್ಲಿಯಾದರೂ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದಾರಾ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.