ADVERTISEMENT

ಆಮ್ಲಜನಕ: ರಾಷ್ಟ್ರೀಯ ಕಾರ್ಯಪಡೆಯಲ್ಲಿ ದೇವಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:31 IST
Last Updated 8 ಮೇ 2021, 19:31 IST
ದೇವಿಪ್ರಸಾದ್‌ ಶೆಟ್ಟಿ
ದೇವಿಪ್ರಸಾದ್‌ ಶೆಟ್ಟಿ   

ನವದೆಹಲಿ: ರಾಜ್ಯಗಳಿಗೆ ವೈಜ್ಞಾನಿಕ ರೀತಿಯಲ್ಲಿ ಆಮ್ಲಜನಕ ಸರಬರಾಜಾಗುವುದನ್ನು ಖಚಿತಪಡಿಸಲು ಸುಪ್ರೀಂ ಕೋರ್ಟ್‌ ಶನಿವಾರ ಉನ್ನತ ಮಟ್ಟದ ವೈದ್ಯಕೀಯ ಅಧಿಕಾರಿಗಳನ್ನೊಳಗೊಂಡ, 12 ಮಂದಿ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ.

ಬೆಂಗಳೂರಿನ ನಾರಾಯಣ ಹೆಲ್ತ್‌ಕೇರ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ದೇವಿಪ್ರಸಾದ್‌ ಶೆಟ್ಟಿ ಅವರು ಕಾರ್ಯಪಡೆಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ರಾಜ್ಯಗಳಿಗೆ ನೀಡುವ ಆಮ್ಲಜನಕದ ಮೇಲ್ವಿಚಾರಣೆಗಾಗಿ ಪ್ರತಿ ರಾಜ್ಯಕ್ಕೆ ಒಂದು ಉಪಸಮಿತಿಯನ್ನು ರಚಿಸುವಂತೆ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಎಂ.ಆರ್‌. ಶಾ ಅವರ ಪೀಠವು ಸೂಚಿಸಿದೆ.

ADVERTISEMENT

ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟದ ಒಬ್ಬ ಅಧಿಕಾರಿ, ಕೇಂದ್ರ ಸರ್ಕಾರದ ಹೆಚ್ಚುವರಿ ಅಥವಾ ಜಂಟಿ ಕಾರ್ಯದರ್ಶಿ ಮಟ್ಟ ಒಬ್ಬ ಅಧಿಕಾರಿ, ಇಬ್ಬರು ವೈದ್ಯರು (ಅವರಲ್ಲಿ ಒಬ್ಬರಿಗೆ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆಯನ್ನು ನಿರ್ವಹಣೆ ಮಾಡಿದ ಅನುಭವ ಇರಬೇಕು) ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ (ಪಿಇಎಸ್‌ಒ) ಒಬ್ಬ ಪ್ರತಿನಿಧಿ ಈ ಉಪಸಮಿತಿಯಲ್ಲಿರಬೇಕು ಎಂದು ಸೂಚಿಸಿದೆ.

‘ರಾಜ್ಯಗಳಿಗೆ ಸರಬರಾಜು ಮಾಡುವ ಆಮ್ಲಜನಕಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ನಮ್ಮ ಉದ್ದೇಶವೇ ವಿನಾ ರೋಗಿಗಳ ಒಳಿತಿಗಾಗಿ ವೈದ್ಯರು ಕೈಗೊಳ್ಳುವ ತೀರ್ಮಾನಗಳನ್ನು ಪ್ರಶ್ನಿಸುವುದಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.