ರಮೇಶ್ ಬಾಬು
ಬೆಂಗಳೂರು: ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಯತ್ನವು ಮನುವಾದದ ಬೆಂಬಲಿಗರ ಷಡ್ಯಂತ್ರದ ಭಾಗ. ಇದರ ಹಿಂದಿರುವ ಕೈಗಳನ್ನು ಪತ್ತೆ ಮಾಡಲು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೂ ಎಸೆತ ಸಣ್ಣ ಪ್ರಮಾಣದ ಕೃತ್ಯವಲ್ಲ. ಇದರ ಹಿಂದಿರುವ ಕುತಂತ್ರ ಬಹಿರಂಗಗೊಳ್ಳಬೇಕು ಎಂದರೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು’ ಎಂದರು.
‘ಇಡೀ ದೇಶದಲ್ಲಿ ಯಾವುದೇ ಸಣ್ಣ ಘಟನೆಯಾದರೂ ಪ್ರಚಾರದ ಉದ್ದೇಶಕ್ಕಾದರೂ ಪ್ರಧಾನಿ ‘ಎಕ್ಸ್’ ಮಾಡುತ್ತಾರೆ. ಆದರೆ, ಶೂ ಎಸೆತ ಘಟನೆಯಾದ ಆರು ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ’ ಎಂದರು.
‘ಮೋದಿ ಅವರ ಸಂಪುಟದ ಸಹೋದ್ಯೋಗಿಗಳು ಇಂತಹ ಘಟನೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗಿದ್ದಾರೆ’ ಎಂದು ಆರೋಪಿಸಿದ ಅವರು, ‘ಗ್ವಾಲಿಯರ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಎನ್ನುವ ವ್ಯಕ್ತಿ ಅಂಬೇಡ್ಕರ್ ಅವರು ಕೊಳಕು ಮನಸ್ಸಿನ ವ್ಯಕ್ತಿ ಎಂದಿದ್ದಾರೆ. ಬಿಜೆಪಿ ಸಿದ್ದಾಂತ ಎಂದಿಗೂ ಪರಿಶಿಷ್ಟ ಜಾತಿ, ಪಂಗಡದ ಪರವಾಗಿಲ್ಲ’ ಎಂದರು.
ಕೆಪಿಸಿಸಿ ರಾಜ್ಯ ಕಾನೂನು ಘಟಕದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ, ‘ಶೂ ಎಸೆತದ ಯತ್ನವು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಹೇಯ ಕೃತ್ಯ. ಸುಪ್ರೀಂ ಕೋರ್ಟ್ನಲ್ಲಿ ಇಂತಹ ಘಟನೆ ನಡೆದರೆ ಇತರ ನ್ಯಾಯಾಲಯಗಳ ಸ್ಥಿತಿಯೇನು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.