ADVERTISEMENT

ನಾಳೆಯಿಂದ ನಗರದಲ್ಲಿ ‘ಸ್ವದೇಶಿ ಮೇಳ’

ಸ್ವದೇಶಿ ಜಾಗರಣ ಮಂಚ್‌ನಿಂದ ಆಯೋಜನೆ: 5 ದಿನ ನಡೆಯಲಿರುವ ಮೇಳ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 3:23 IST
Last Updated 5 ಏಪ್ರಿಲ್ 2022, 3:23 IST
ಪ್ರಕಾಶ್‌ ಬೆಳವಾಡಿ (ಎಡದಿಂದ ಮೂರನೇಯವರು) ಸ್ವದೇಶಿ ಮೇಳದ ಕೈಪಿಡಿ ಬಿಡುಗಡೆ ಮಾಡಿದರು. ಮೇಳದ ಸಂಘಟಕ ಬಿ.ಎಚ್.ರಘುರಾಮ್, ಕೆ.ಜಗದೀಶ, ಕಿಶೋರ್ ಪಟವರ್ಧನ್ ಇದ್ದರು–ಪ್ರಜಾವಾಣಿ ಚಿತ್ರ‌
ಪ್ರಕಾಶ್‌ ಬೆಳವಾಡಿ (ಎಡದಿಂದ ಮೂರನೇಯವರು) ಸ್ವದೇಶಿ ಮೇಳದ ಕೈಪಿಡಿ ಬಿಡುಗಡೆ ಮಾಡಿದರು. ಮೇಳದ ಸಂಘಟಕ ಬಿ.ಎಚ್.ರಘುರಾಮ್, ಕೆ.ಜಗದೀಶ, ಕಿಶೋರ್ ಪಟವರ್ಧನ್ ಇದ್ದರು–ಪ್ರಜಾವಾಣಿ ಚಿತ್ರ‌   

ಬೆಂಗಳೂರು: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಾಗೂ ಗೃಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ಸ್ವದೇಶಿ ಜಾಗರಣ ಮಂಚ್‌–ಕರ್ನಾಟಕವು ‘ಸ್ವದೇಶಿ ಮೇಳ’ ಹಮ್ಮಿಕೊಂಡಿದೆ.

ಇದೇ 6ರಿಂದ 10ರವರೆಗೆ (ಬೆಳಿಗ್ಗೆ 10 ರಿಂದ ರಾತ್ರಿ 9) ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ (ಶಾಲಿನಿ ಮೈದಾನ) ಮೇಳ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸ್ವದೇಶಿ ಮೇಳದ ಸಂಚಾಲಕ ಪ್ರಕಾಶ್‌ ಬೆಳವಾಡಿ, ‘ಜನರಲ್ಲಿ ಸ್ವದೇಶಿ ಭಾವ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಅಪಾಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 1991ರಲ್ಲಿ ಸ್ವದೇಶಿ ಜಾಗರಣ ಮಂಚ್ ಸ್ಥಾಪನೆಗೊಂಡಿತು. ಇದು ಸ್ವದೇಶಿ ವಸ್ತುಗಳ ಪರಿಚಯ, ಸಾವಯವ ಸಂತೆ, ಸ್ವಯಂ ಉದ್ಯೋಗ ತರಬೇತಿ, ಆಯುರ್ವೇದ ಶಿಬಿರ ಹಾಗೂ ಸ್ವದೇಶಿ ಮೇಳದಂತಹ ಹಲವಾರು ರಚನಾತ್ಮಕ ಕೆಲಸಗಳನ್ನು ಮಾಡಿಕೊಂಡು ಬಂದಿದೆ’ ಎಂದು ತಿಳಿಸಿದರು.

ADVERTISEMENT

‘ಸ್ವದೇಶಿ ಮೇಳದಲ್ಲಿ ತಜ್ಞರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಏಪ್ರಿಲ್‌ 7ರಂದು ತಾರಸಿ ತೋಟ ಕುರಿತ ತರಬೇತಿ, ಏಪ್ರಿಲ್‌ 8ರಂದು ನಿತ್ಯ ಬಳಕೆ ವಸ್ತು ತಯಾರಿ ಶಿಬಿರ, ಏಪ್ರಿಲ್‌ 9ರಂದು ಆಯುರ್ವೇದ ಹಾಗೂ ಪಂಚಗವ್ಯ ಚಿಕಿತ್ಸಾ ಶಿಬಿರಗಳು ಹಾಗೂ ಏ‍ಪ್ರಿಲ್‌ 10ರಂದು ಸ್ವದೇಶಿ ವಸ್ತು ಭಂಡಾರ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಶಿಬಿರ ಹಾಗೂ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವವರಿಗೆ ₹200 ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸ್ವದೇಶಿ ಜಾಗರಣ ಮಂಚ್‌ನ ಕ್ಷೇತ್ರೀಯ ಸಂಘಟಕ ಕೆ.ಜಗದೀಶ‌, ‘ಸ್ವದೇಶಿ ಉತ್ಪನ್ನಗಳ ಕುರಿತು ಅರಿವು ಮೂಡಿಸುವುದು ಹಾಗೂ ಸಣ್ಣ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುವುದು ಮೇಳದ ಮುಖ್ಯ ಉದ್ದೇಶ. ಮೇಳದಲ್ಲಿ 220ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಮಂದಿ ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.