ADVERTISEMENT

ಗಂಜಿ ಸೇವಿಸಿದ ಸಿದ್ಧಗಂಗಾಶ್ರೀ; ವಾರ್ಡ್‌ಗೆ ಸ್ಥಳಾಂತರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 14:12 IST
Last Updated 12 ಡಿಸೆಂಬರ್ 2018, 14:12 IST
ಡಾ.ಶಿವಕುಮಾರ ಸ್ವಾಮೀಜಿ
ಡಾ.ಶಿವಕುಮಾರ ಸ್ವಾಮೀಜಿ   

ತುಮಕೂರು: ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಗುರುವಾರ ವಿಶೇಷ ವಾರ್ಡ್‌ಗೆ ವೈದ್ಯರು ಸ್ಥಳಾಂತರ ಮಾಡಲಿದ್ದಾರೆ.

‘ಮಂಗಳವಾರ ಎಳನೀರು, ಹಣ್ಣಿನ ರಸ ಸೇವಿಸಿದ್ದ ಸ್ವಾಮೀಜಿ ಬುಧವಾರವೂ ದ್ರವರೂಪದ ಆಹಾರ ಸೇವಿಸಿದ್ದಾರೆ. ಎಳನೀರು, ಹಣ್ಣಿನ ರಸದ ಜೊತೆಗೆ ಗಂಜಿಯನ್ನು ಸೇವಿಸಿದ್ದಾರೆ. ಬುಧವಾರವೇ ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿತ್ತು. ಡಾ.ಮಹಮ್ಮದ್ ರೇಲಾ ಅವರು ಗುರುವಾರ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ‘ ಎಂದು ಸ್ವಾಮೀಜಿ ಚಿಕಿತ್ಸೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ತುಮಕೂರು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬುಧವಾರವೂ ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿದ್ದಾರೆ. ಮಠಕ್ಕೆ ಹೋಗೋಣ ಎಂದು ಎಂದಿನಂತೆಯೇ ಕೇಳಿದ್ದಾರೆ. ಸ್ವಾಮೀಜಿ ನೋಡಲು ಸಾರ್ವಜನಿಕರಿಗೆ ಅವಕಾಶ ನಿರ್ಬಂಧ ಮುಂದುವರಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

ದೇವರಿಲ್ಲದ ಗುಡಿ

ಇತ್ತ ತುಮಕೂರಿನ ಸಿದ್ಧಗಂಗಾಮಠ ‘ದೇವರಿಲ್ಲದ ಗುಡಿ’ಯಂತೆ ಗೋಚರಿಸುತ್ತಿದೆ. ಸ್ವಾಮೀಜಿಯವರ ದರ್ಶನಕ್ಕಾಗಿಯೇ ಬರುತ್ತಿದ್ದ ನಾಡಿನ ವಿವಿಧ ಭಾಗ, ಹೊರ ರಾಜ್ಯದ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಶಬರಿ ಮಲೈಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರು, ಪ್ರವಾಸಿಗರು ಮಾತ್ರ ಮಠಕ್ಕೆ ಬಂದು ಹೋಗುತ್ತಿದ್ದಾರೆ.

ಆಸ್ಪತ್ರೆಯಲ್ಲಿರುವ ಸ್ವಾಮೀಜಿ ಮಠದ ಮಕ್ಕಳನ್ನು ನೋಡಲು ಹಾತೊರೆಯುತ್ತಿರುವಂತೆಯೇ ಮಠದ ವಸತಿ ಶಾಲೆ ಮಕ್ಕಳೂ ಸ್ವಾಮೀಜಿ ಅವರ ದರ್ಶನಕ್ಕೆ ಕಾತುರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.